ADVERTISEMENT

ಕಲಬುರ್ಗಿ: ಇಷ್ಟಲಿಂಗ ನಿರೀಕ್ಷಣೆಯಿಂದ ಭಾವಶುದ್ಧಿ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 14:28 IST
Last Updated 29 ಜೂನ್ 2020, 14:28 IST
ಕಲಬುರ್ಗಿಯಲ್ಲಿ ಭಾನುವಾರ ನಡೆದ ಆನ್‌ಲೈನ್‌ ಅನುಭಾವ ಕಾರ್ಯಕ್ರಮದಲ್ಲಿ ಡಾ.ಗಂಗಾಂಬಿಕಾ ಪಾಟೀಲ ಮಾತನಾಡಿದರು
ಕಲಬುರ್ಗಿಯಲ್ಲಿ ಭಾನುವಾರ ನಡೆದ ಆನ್‌ಲೈನ್‌ ಅನುಭಾವ ಕಾರ್ಯಕ್ರಮದಲ್ಲಿ ಡಾ.ಗಂಗಾಂಬಿಕಾ ಪಾಟೀಲ ಮಾತನಾಡಿದರು   

ಕಲಬುರ್ಗಿ: ‘ಇಷ್ಟಲಿಂಗವನ್ನು ನಿರೀಕ್ಷಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿನ ನವಚಕ್ರಗಳು ಜಾಗ್ರತವಾಗಿ ನವಚೈತನ್ಯ ಮೂಡುತ್ತದೆ. ಇಷ್ಟಲಿಂಗ ಪೂಜೆಯಿಂದ ಇಚ್ಛಾಶಕ್ತಿ ಹೆಚ್ಚುತ್ತದೆ. ನುಡಿಯಲ್ಲಿ ಮೃದುತ್ವ ಬರುತ್ತದೆ’ ಎಂದು ಬೀದರ್‌ನ ಬಸವ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ.ಗಂಗಾಂಬಿಕಾ ಪಾಟೀಲ ಹೇಳಿದರು.

ಕಲಬುರ್ಗಿಯಲ್ಲಿ ಭಾನುವಾರ ನಡೆದ ಬಸವ ಸಮಿತಿಯ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ 633ನೇ ಆನ್‌ಲೈನ್ ದತ್ತಿ ಕಾರ್ಯಕ್ರಮದಲ್ಲಿ ‘ಬಸವ ತತ್ವಜ್ಞಾನದಲ್ಲಿ ಇಷ್ಟಲಿಂಗ ಪರಿಕಲ್ಪನೆ’ ಕುರಿತು ಅವರು ಮಾತನಾಡಿದರು.

‘ಇಷ್ಟಲಿಂಗ ಮನುಷ್ಯನ ಶರೀರವನ್ನು ವ್ಯಾಪಿಸಿದೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಮೂರು ಮುಖ್ಯವಾಗಿವೆ. ನೋಟದ ಭಕ್ತಿ ಬಸವಣ್ಣನಿಂದಾಯಿತು ಎಂದು ಶಿವಯೋಗಿ ಸಿದ್ಧರಾಮೇಶ್ವರರು ಹೇಳಿದ್ದಾರೆ. ಕೈಯಲ್ಲಿ ಇರುವ ಲಿಂಗ ಮನುಷ್ಯನ ಕಷ್ಟಗಳನ್ನು ನಿವಾರಿಸುತ್ತದೆ. ಲಿಂಗವನ್ನು ಎಡಗೈಯಲ್ಲಿ ಇಟ್ಟು ನಿರೀಕ್ಷಣೆ ಮಾಡಿದರೆ ಏಕಾಗ್ರತೆ ಮೂಡಿ, ಮನಸ್ಸು ನಿರುಮ್ಮಳವಾಗಿ ಭಾವ ಶುದ್ಧಗೊಳ್ಳುವುದು ಅನುಭವಕ್ಕೆ ಬರುತ್ತದೆ’ ಎಂದರು.

ADVERTISEMENT

‘ಮನಸ್ಸು ಚಂಚಲವಾಗಿದೆ. ಅದನ್ನು ಇಷ್ಟಲಿಂಗ ಪೂಜೆಯ ಮೂಲಕ ನಿಗ್ರಹಿಸಬೇಕು. ಮನುಷ್ಯ ಲಿಂಗವನ್ನು ನೋಡುತ್ತ ನೋಡುತ್ತ ಲಿಂಗವೇ ತಾನಾಗುತ್ತಾನೆ. ಅಂಧಾನುಕರಣೆಗಳನ್ನು ಬಿಟ್ಟು ವೈಚಾರಿಕವಾದ, ವೈಜ್ಞಾನಿಕವಾದ ಇಷ್ಟಲಿಂಗ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಾ.ಜಯಶ್ರಿ ದಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿಯ ಅಧ್ಯಕ್ಷೆ, ದತ್ತಿ ದಾಸೋಹಿ ಆದ ಡಾ.ವಿಲಾಸವತಿ ಖೂಬಾ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.