ADVERTISEMENT

ಕಲಬುರಗಿ | ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.6ರಿಂದ ಪಾದಯಾತ್ರೆ

ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ನೇತೃತ್ವದಲ್ಲಿ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:24 IST
Last Updated 3 ನವೆಂಬರ್ 2025, 7:24 IST
ಕಲಬುರಗಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಕೈಗೊಳ್ಳುವ ಪಾದಯಾತ್ರೆಯ ಬೇಡಿಕೆ ಪತ್ರ ಬಿಡುಗಡೆ ಮಾಡಲಾಯಿತು
ಕಲಬುರಗಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಕೈಗೊಳ್ಳುವ ಪಾದಯಾತ್ರೆಯ ಬೇಡಿಕೆ ಪತ್ರ ಬಿಡುಗಡೆ ಮಾಡಲಾಯಿತು   

ಕಲಬುರಗಿ: ‘ಮುಂದಿನ ವರ್ಷ ಜ.6ರಿಂದ ಚಿತ್ತಾಪುರ ತಾಲ್ಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಿಂದ 41 ದಿನಗಳವರೆಗೆ ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೆ 700 ಕಿಲೋ ಮೀಟರ್ ಪಾದಯಾತ್ರೆಗೆ ನಿರ್ಧರಿಸಲಾಗಿದೆ. ಈ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಪ್ರತಿದಿನ 20 ಕಿ.ಮೀ ಪಾದಯಾತ್ರೆ ನಡೆಸಲಾಗುವುದು’ ಎಂದು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ನಗರದ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮಾಜದ ಮುಖಂಡರ ಸಭೆಯಲ್ಲಿ ಪ್ರಣವಾನಂದ ಶ್ರೀಗಳು, ಪಾದಯಾತ್ರೆಯ ಬೇಡಿಕೆ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಪಾದಯಾತ್ರಯನ್ನು ಕೇಂದ್ರ ಸಚಿವ ಶ್ರೀಪಾದ ನಾಯಕ್ ಉದ್ಘಾಟಿಸಲಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು ಭಾಗಿಯಾಗಲಿದ್ದಾರೆ. ಪಾದಯಾತ್ರೆಯ ಯಶಸ್ಸಿಗಾಗಿ ಬೀದರ್‌ನ 7 ತಾಲ್ಲೂಕು, ಕಲಬುರಗಿ 10, ರಾಯಚೂರು, ಯಾದಗಿರಿ 7, ವಿಜಯಪುರದ 14 ತಾಲ್ಲೂಕು ಸೇರಿದಂತೆ ವಿವಿಧಡೆ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕ ಸದಾನಂದ ಪೆರ್ಲ ತಿಳಿಸಿದರು.

ADVERTISEMENT

ಸಮುದಾಯದ ಅಭಿವೃದ್ಧಿಗಾಗಿ 16 ಬೇಡಿಕೆಗಳನ್ನು ಮಂಡಿಸಲಾಗುವುದು. ಎರಡೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಮುದಾಯಕ್ಕೆ ಯಾವುದೇ ಅನುಕೂಲ ಮಾಡಿಕೊಡಲಿಲ್ಲ. ಸಮುದಾಯದ ಮುಖಂಡರ ಒಂದು ನಿಯೋಗವನ್ನು ಕೂಡ ಸಿಎಂ ಬಳಿ ಕರೆದೊಯ್ಯಲು ಈವರೆಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಪಾದಯಾತ್ರೆಯಲ್ಲಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ನಾರಾಯಣ ಗುರುಗಳ ಪ್ರತಿಮೆ ಹೊಂದಿದ ವಿಶೇಷ ರಥ, ಎರಡು ಅಲಂಕೃತ ವಾಹನಗಳು, ಇನ್ನೊಂದು ಲಗೇಜ್ ವಾಹನ ಇರಲಿದೆ. ಸ್ವಾಮೀಜಿಯವರೊಂದಿಗೆ ಕನಿಷ್ಠ ನೂರು ಜನ ನಿತ್ಯ ಪಾಲ್ಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ ನೀಡಿ ಚರ್ಚೆ ನಡೆಸಿ ಲಿಖಿತವಾಗಿ ಆಶ್ವಾಸನೆ ನೀಡಿದರೆ ಮಾತ್ರ ಪಾದಯಾತ್ರೆ ಮುಂದೂಡುವ ಬಗ್ಗೆ ಮರುಚಿಂತನೆ ಮಾಡಲಾಗುವುದು. ಇಲ್ಲವಾದರೆ ನಿರ್ಧರಿಸಿದಂತೆ ಪಾದಯಾತ್ರೆ ಮುಂದುವರಿಯಲಿದೆ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪೇಂದ್ರ ಗುತ್ತೇದಾರ ವಹಿಸಿದ್ದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ, ಶಕ್ತಿ ಪೀಠದ ಟ್ರಸ್ಟಿ ವೆಂಕಟೇಶ ಗುಂಡಾನೂರ, ರಾಜೇಶ ಗುತ್ತೇದಾರ, ಸುರೇಶ ಗುತ್ತೇದಾರ್ ಕರದಾಳ, ಶಂಕರ ಲೀಡರ್, ಅಂಬಯ್ಯ ಗುತ್ತೇದಾರ, ಇಬ್ರಾಹಿಂಪೂರ, ಶಿವರಾಜ ಗುತ್ತೇದಾರ ಜೇವರ್ಗಿ, ಮಲ್ಲಯ್ಯ ಗುತ್ತೇದಾರ, ಬಸಯ್ಯ ಗುತ್ತೇದಾರ ತೆಲ್ಲೂರ, ರಾಮಕೃಷ್ಣ ಅಶೋಕ ಗುತ್ತೇದಾರ ರಾಯಚೂರ, ಮಹೇಶಗೌಡ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

‘ವಿ.ವಿಗೆ ನಾರಾಯಣ ಗುರು ಹೆಸರಿಡಿ’

‘ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಂತರ ಮತ್ತು ಮಹಾನ್ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವ ಮಂಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮಾಡಬೇಕು’ ಎಂದು ಪ್ರಣವಾನಂದ ಸ್ವಾಮೀಜಿ ಮನವಿ ಮಾಡಿದರು. ‘ವಿವಿಧ ವಿಶ್ವವಿದ್ಯಾಲಯಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವ ಮುಖ್ಯಮಂತ್ರಿಗಳ ಪ್ರಸ್ತಾವವನ್ನು ಸ್ವಾಗತಿಸುತ್ತೇನೆ. ಹಾಗೇ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಮುಖ್ಯ ಕಾರ್ಯದರ್ಶಿಗಳು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸುವ ಪ್ರಸ್ತಾಪ ಸೇರಿಸಿಕೊಳ್ಳಬೇಕು’ ಎಂದರು. ‘ನಾರಾಯಣ ಗುರುಗಳು ಕರ್ನಾಟಕಕ್ಕೆ ಭೇಟಿ ನೀಡಿದ ಏಕೈಕ ಸ್ಥಳ ಮಂಗಳೂರು. 1908 ರಿಂದ 1912ರ ಮಧ್ಯೆ ಮೂರು ಸಲ ಮಂಗಳೂರಿಗೆ ಭೇಟಿ ನೀಡಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಏಷ್ಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಶಿವಗಿರಿಯಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಿ ನೂರು ವರ್ಷ ಸಂದಿದೆ. ನಾರಾಯಣ ಗುರುಗಳ ಸಮಾಧಿ ಕಾರ್ಯಕ್ರಮದ ಶತಮಾನೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಿವಗಿರಿಯಲ್ಲಿ ಚಾಲನೆ ನೀಡಿರುವುದರಿಂದ ಇಂತಹ ಮಹಾನ್ ಸಂಗತಿಗಳ ಮಹತ್ವದ ವರ್ಷದಲ್ಲಿ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವುದು ಸೂಕ್ತ’ ಎಂದು ಸ್ವಾಮೀಜಿ ಒತ್ತಾಯಿಸಿದರು.