ADVERTISEMENT

ಪಡಸಾವಳಿ ಪಿಡಿಒ ವಾಹನ ಡಿಕ್ಕಿ: ವೃದ್ಧ ಸಾವು

ಸಂತೆಗೆ ಸೇರಿದ್ದ ಜನರನ್ನು ಚದುರಿಸಲು ಮುಂದಾದ ಪಿಡಿಒ ದಶರಥ ಪಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 15:02 IST
Last Updated 10 ಜೂನ್ 2020, 15:02 IST
ಆಳಂದ ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ದಯಾನಂದ ಪಾಟೀಲ, ಡಾ.ಸಂಜಯ ರೆಡ್ಡಿ ಇದ್ದರು
ಆಳಂದ ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ದಯಾನಂದ ಪಾಟೀಲ, ಡಾ.ಸಂಜಯ ರೆಡ್ಡಿ ಇದ್ದರು   

ಆಳಂದ: ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಾಹನ ಡಿಕ್ಕಿಹೊಡೆದು ಗ್ರಾಮದ ವೃದ್ಧರೊಬ್ಬರು ಮೃತ ಘಟನೆ ಬುಧವಾರ ನಡೆದಿದೆ. ಪಿಡಿಒ ದಶರಥ ಪಾತ್ರೆ ಅವರನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ.

ಬಾಬು ಸೈಫಾನ ಮುಲಗೆ (62) ಮೃತರು. ಗ್ರಾಮ ಪಂಚಾಯಿತಿ ಕಚೇರಿ ಮುಂದೆ ತರಕಾರಿ ಸಂತೆ ಸೇರುತ್ತಿತ್ತು. ಜನರನ್ನು ಚದುರಿಸಲು ಪಿಡಿಒ ಕಟ್ಟಿಗೆ ಹಿಡಿದು ಜನರನ್ನು ಚದುರಿಸಲು ಮುಂದಾದರು. ಇದು ಹೆಚ್ಚಿನ ಗೊಂದಲಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಅವರ ವಾಹನವು ಡಿಕ್ಕಿ ಹೊಡೆದು ಗಾಯಗೊಂಡ ವೃದ್ಧ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಸಾವನ್ನಪ್ಪಿದರು.

ಪ್ರತಿಭಟನೆ: ಆಕ್ರೋಶಗೊಂಡ ಗ್ರಾಮಸ್ಥರು ಪಿಡಿಒ ದಶರಥ ಅವರನ್ನು ಕಚೇರಿಯಲ್ಲಿ ಕೂಡಿ ಹಾಕಿ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ADVERTISEMENT

ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮರ್ಬಾನ್ಯಾಂಗ್, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ತಹಶೀಲ್ದಾರ್ ದಯಾನಂದ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ರೆಡ್ಡಿ, ಪಿಎಸ್ಐ ಬಾಬುಗೌಡ ಪಾಟೀಲ ಭೇಟಿ ನೀಡಿ ಜನರನ್ನು ಸಮಾಧಾನಪಡಿಸಿದರು.

ಮೃತನ ಕುಟುಂಬದ ಸದಸ್ಯರೊಬ್ಬರಿಗೆ ಪಂಚಾಯಿತಿಯಲ್ಲಿ ನೌಕರಿ ಕೊಡಬೇಕು. ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡಬೇಕು ಹಾಗೂ ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಪ್ರತಿಭಟನೆಯ ಕಾವು ಹೆಚ್ಚಿದ ಪರಿಣಾಮ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ನಂತರ ಗ್ರಾಮಸ್ಥರು ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಹಾಗೂ ಸಂಜಯ ರೆಡ್ಡಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.