ನಿಂಬರ್ಗಾ (ಆಳಂದ): ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಕೊಲೆಗೆ ಸಂಬಂಧಿಸಿದಂತೆ ಬುಧವಾರ ನಿಂಬರ್ಗಾ ಪೊಲೀಸ್ರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಫೆಬ್ರುವರಿ 16ರಂದು ಪಟ್ಟಣ ಕ್ರಾಸ್ ಸಮೀಪದ ಮುಖ್ಯರಸ್ತೆಯಲ್ಲಿ ಆಳಂದ ತಾಲ್ಲೂಕಿನ ಧಂಗಾಪುರ ಗ್ರಾಮದ ನಿವಾಸಿ ರವಿ ಸುಭಾಷ ನೀಲೂರು (35) ಕೊಲೆ ನಡೆದಿತ್ತು. ಈ ಕೊಲೆಯ ತನಿಖೆ ನಡೆಸತ್ತಿದ್ದ ಪೊಲೀಸರು ಬುಧವಾರ ಅಫಜಲಪುರ ತಾಲ್ಲೂಕಿನ ಬಡದಾಳದ ನಿವಾಸಿಗಳಾದ ಹುಚ್ಚಪ್ಪ ಶಿವಪ್ಪ ಬಸರಿಗಿಡ, ಲಾಡಪ್ಪ ಮಹಾದೇವಪ್ಪ ಉದಯಕರ, ಘತ್ತರಗಿಯ ಬಸವರಾಜ ಶರಣಪ್ಪ ಸಿಂಗೆ ಹಾಗೂ ಮೃತ ವ್ಯಕ್ತಿಯ ಪತ್ನಿ ಚಂದ್ರಕಲಾ ರವಿ ನೀಲೂರು ಅವರನ್ನು ಬಂಧಿಸಿದ್ದಾರೆ.
‘ಆರೋಪಿ ಹುಚ್ಚಪ್ಪ ಬಸರಿಗಿಡ ಜತೆ ಮೃತ ವ್ಯಕ್ತಿಯ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರು ಸಂಚು ರೂಪಿಸಿ ಪ್ರಿಯಕರ ಹುಚ್ಚಪ್ಪ ತನ್ನ ಸಂಗಡಿಗರ ಜೊತೆಗೂಡಿ ಪತಿ ರವಿ ನೀಲೂರು ಅವರನ್ನು ಕೊಲೆ ಮಾಡಿರುವುದು ವಿಚಾರಣೆಯಲ್ಲಿ ಹೊರ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಮಂಜುನಾಥ, ಪಿಎಸ್ಐ ಸುವರ್ಣಾ ಮಲಶೆಟ್ಟಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.