ವಂಚನೆ
ಕಲಬುರಗಿ: ‘ಮೊಬೈಲ್ ಫೋನ್ ವಾಟ್ಸ್ಆ್ಯಪ್ಗೆ ಬಂದ ಪಿ.ಎಂ ಕಿಸಾನ್ ಹೆಸರಿನ ಲಿಂಕ್ ಒತ್ತಿದ ಪಾನಿಪುರಿ ವ್ಯಾಪಾರಿಯೊಬ್ಬರು ಬರೋಬರಿ ₹ 3.93 ಲಕ್ಷ ಕಳೆದುಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬಡೇಪುರ ಕಾಲೊನಿ ನಿವಾಸಿ ಅಪ್ಪಾರಾವ ಸೋಪುರೆ ಹಣ ಕಳೆದುಕೊಂಡವರು. ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಲಗಾಂವ ಗ್ರಾಮದವರಾದ ಅಪ್ಪಾರಾವ ಕಳೆದ 10 ವರ್ಷಗಳಿಂದ ಬಡೇಪುರ ಕಾಲೊನಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದಾರೆ.
‘ಜುಲೈ 15ರಂದು ಸಂಜೆ 6 ಗಂಟೆ ಹೊತ್ತಿಗೆ ಮನೆಯಲ್ಲಿದ್ದಾಗ ನನ್ನ ವಾಟ್ಸ್ಆ್ಯಪ್ಗೆ ಅಪರಿಚಿತ ಮೊಬೈಲ್ ಫೋನ್ ಸಂಖ್ಯೆಯಿಂದ P.M KISAN ಯೋಜನೆಯ ಲಿಂಕ್ ಬಂದಿತ್ತು. ನಮ್ಮ ಹೊಲಗಳಿಗೆ ಸಂಬಂಧಿಸಿದ ವಿಮೆ ಹಣ ಅಥವಾ ಸರ್ಕಾರದ ನೀಡುವ ಹಣಕ್ಕೆ ಸಂಬಂಧಿಸಿದ ಲಿಂಕ್ ಎಂದುಕೊಂಡು ಅದನ್ನು ಕ್ಲಿಕ್ ಮಾಡಿದೆ. ತಕ್ಷಣ ನನ್ನ ಮೊಬೈಲ್ ಹ್ಯಾಕ್ ಆಗಿ ನನಗೆ ವಿವಿಧ ಬಗೆಯ ಒಟಿಪಿಗಳು ಬಂದವು. ಗಾಬರಿಯಿಂದ ನನ್ನ ಮೊಬೈಲ್ ಫೋನ್ ಆಫ್ ಮಾಡಿದೆ. ಮರುದಿನ ಮೊಬೈಲ್ ಫೋನ್ ಸ್ವೀಚ್ ಆನ್ ಮಾಡಿ ನೋಡಿದಾಗ ಅದರಲ್ಲಿ ಹಲವು ಒಟಿಪಿಗಳು ಬಂದಿದ್ದವು. ನನ್ನ ಮೊಬೈಲ್ ಫೋನ್ ಕೂಡ ಬಂದ್ ಆಗಿತ್ತು. ಮೊಬೈಲ್ ಹ್ಯಾಕ್ ಆಗಿದ್ದರಿಂದ ಮೊಬೈಲ್ ನೆಟ್ವರ್ಕ್ ಬಂದಿಲ್ಲ ಎಂದುಕೊಂಡು ಸುಮ್ಮನಿದ್ದೆ’ ಎಂದು ದೂರಿನಲ್ಲಿ ಅಪ್ಪಾರಾವ ಸೋಪುರೆ ಹೇಳಿದ್ದಾರೆ.
‘ಈ ನಡುವೆ, ಈ ಹಿಂದೆ ನಾನು ನಿವೇಶನ ಖರೀದಿ ಸಂಬಂಧವಾಗಿ ಪರಿಚಯಸ್ಥರೊಬ್ಬರಿಗೆ ₹ 3.91 ಲಕ್ಷದ ಚೆಕ್ ನೀಡಿದ್ದೆ. ಅವರು ನನಗೆ ಕರೆ ಮಾಡಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ, ಚೆಕ್ ಬೌನ್ಸ್ ಆಗಿದೆ ಎಂದರು. ನಾನು ಜುಲೈ 22ರಂದು ಬ್ಯಾಂಕ್ಗೆ ಹೋಗಿ ಪರಿಶೀಲಿಸಿದೆ. ಆಗ ಜುಲೈ 16ರಿಂದ ಜುಲೈ 20ರ ತನಕ ₹ 3.93 ಲಕ್ಷ ನನ್ನ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ವರ್ಗಾಯಿಸಿದ ವಿಷಯ ತಿಳಿಯಿತು. ಜುಲೈ 16ರಂದು ₹ 99,500, ಜುಲೈ 17ರಂದು ₹ 99,500, ಜುಲೈ 18ರಂದು ₹ 98,500 ಹಾಗೂ ಜುಲೈ 20ರಂದು ₹ 96,000 ಯುಪಿಐ ಮೂಲಕ ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಅಪ್ಪಾರಾವ ವಿವರಿಸಿದ್ದಾರೆ.
ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕುಳ: 6 ಮಂದಿ ವಿರುದ್ಧ ಪ್ರಕರಣ
‘ಮದುವೆಯಾಗಿ ಎಂಟು ವರ್ಷಗಳಾದರೂ ಮಕ್ಕಳಾಗಿಲ್ಲ ಎಂದು ಪತ್ನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಅವರ ಪತಿ, ಸರ್ಕಾರಿ ಶಾಲೆ ಸಹ ಶಿಕ್ಷಕ ಸೇರಿದ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಡಬರಾಬಾದ್ ಕ್ರಾಸ್ ಸಮೀಪದ ಹೊಡ್ಡಿನಮನೆ ಬಡಾವಣೆ ನಿವಾಸಿ ಪೂಜಾ ಚಿಕಬಸ್ತಿ ದೂರು ನೀಡಿದ ಸಂತ್ರಸ್ತೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ
ಕಲಬುರಗಿಯ ಸೇಡಂ ರಸ್ತೆಯ ಸ್ವಾಮಿ ನಾರಾಯಣ ಶಾಲೆ ಸಮೀಪದ ಖಾಲಿ ಜಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 8 ಮಂದಿ ವಿರುದ್ಧ ಕ್ರಮ ಕೈಗೊಂಡಿರುವ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಅವರಿಂದ ₹ 9,120 ಜಪ್ತಿ ಮಾಡಿಕೊಂಡಿದ್ದಾರೆ.
ಮಟ್ಕಾ ಜೂಜಾಟ
ನಗರದ ಸೇಡಂ ಮುಖ್ಯ ರಸ್ತೆಯ ಎಸ್.ಆರ್.ಎನ್ ಮೆಹತಾ ಶಾಲೆ ಸಮೀಪ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡಿರುವ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು, ಆತನಿಂದ ₹ 3,700 ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.