ADVERTISEMENT

ಕಲಬುರ್ಗಿ: ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ

ನಗರ ಪೊಲೀಸ್‌ ಪ್ರಥಮ ವರ್ಷದ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 15:29 IST
Last Updated 9 ಮಾರ್ಚ್ 2021, 15:29 IST
ಕಲಬುರ್ಗಿ ನಗರ ಪೊಲೀಸ್‌ನ ಪ್ರಥಮ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪೊಲೀಸ್ ಕಮಿಷನರ್‌ ಸತೀಶಕುಮಾರ್ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ದಿಲೀಷ್ ಸಸಿ, ವಿ.ವಿ. ಜ್ಯೋತ್ಸ್ನಾ, ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಡಿಸಿಪಿ ಕಿಶೋರ್ ಬಾಬು ಇದ್ದಾರೆ
ಕಲಬುರ್ಗಿ ನಗರ ಪೊಲೀಸ್‌ನ ಪ್ರಥಮ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪೊಲೀಸ್ ಕಮಿಷನರ್‌ ಸತೀಶಕುಮಾರ್ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ದಿಲೀಷ್ ಸಸಿ, ವಿ.ವಿ. ಜ್ಯೋತ್ಸ್ನಾ, ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಡಿಸಿಪಿ ಕಿಶೋರ್ ಬಾಬು ಇದ್ದಾರೆ   

ಕಲಬುರ್ಗಿ: ‘ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪೊಲೀಸರು ದಿನನಿತ್ಯದ ಒತ್ತಡದಿಂದ ಹೊರಗೆ ಬರಬಹುದು’ ಎಂದು ಕಲಬುರ್ಗಿ ಪೊಲೀಸ್‌ ಕಮಿಷನರ್ ಸತೀಶಕುಮಾರ್‌ ಎನ್‌. ತಿಳಿಸಿದರು.

ಪೊಲೀಸ್‌ ಆಯುಕ್ತಾಲಯ ರಚನೆಯಾದ ಬಳಿಕ ಮಂಗಳವಾರ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ನಗರ ಪೊಲೀಸ್‌ ಪ್ರಥಮ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೈಹಿಕ ಆರೋಗ್ಯವನ್ನು ಉಳಿಸಿಕೊಳ್ಳಬೇಕೆಂದರೆ ಕ್ರೀಡೆ ಸಹಕಾರಿಯಾಗುತ್ತದೆ. ಆದ್ದರಿಂದ ಎರಡು ದಿನಗಳು ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಆಯುಕ್ತಾಲಯ ವ್ಯಾಪ್ತಿಯ ಪೊಲೀಸ್‌ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಬೇಕು’ ಎಂದರು.

ADVERTISEMENT

‘ಕಳೆದ ವರ್ಷ ಕೊರೊನಾ ಹೆಚ್ಚಾದ ಸಂದರ್ಭದಲ್ಲಿ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಬಂದೋಬಸ್ತ್ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವರಿಗೆ ಸೋಂಕು ತಗುಲಿತ್ತು. ಅವರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, ಎರಡನೇ ಹಂತದ ಲಸಿಕೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಹೊಸದಾಗಿ ಆಯುಕ್ತಾಲಯ ರಚನೆಯಾಗಿದ್ದರಿಂದ ಸಿಬ್ಬಂದಿ ಕೊರತೆ ಕಾಡುತ್ತಿದೆ. ಗಸ್ತಿಗಾಗಿ ಹೊಸ ವಾಹನಗಳೂ ವಿವಿಧ ಠಾಣೆಗಳಿಗೆ ಬಂದಿಲ್ಲ. ಹೊಸದಾಗಿ ನೇಮಕವಾದ ಸಿಬ್ಬಂದಿ ತರಬೇತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಅವರ ತರಬೇತಿ ಮುಗಿಸಿ ವಿವಿಧ ಠಾಣೆಗಳಿಗೆ ನಿಯೋಜನೆಗೊಳ್ಳಲಿದ್ದಾರೆ. ಹೊಸ ವಾಹನಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಕೆಆರ್‌ಡಿಬಿಯಿಂದಲೂ ಜೀಪ್‌ಗಳ ಖರೀದಿಗೆ ಹಣ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಸತೀಶಕುಮಾರ್‌ ತಿಳಿಸಿದರು.

‘ಇಲಾಖೆಯ ಕೆಲ ಸಿಬ್ಬಂದಿ ಶಿಸ್ತು ಮೀರುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗದಂತೆ ಎಚ್ಚರ ವಹಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‍ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್‌ ಸಸಿ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ. ಕಿಶೋರಬಾಬು ಸ್ವಾಗತಿಸಿದರು. ಎಸಿಪಿ ಗಿರೀಶ ಎಸ್‌.ಬಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.