ಕಲಬುರಗಿ: ‘ಪುಟ್ಟರಾಜ ಗವಾಯಿಗಳಿಗೆ ಶರಣಬಸವೇಶ್ವರ ವಿಶ್ವವಿದ್ಯಾಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಬೇಕು’ ಎಂದು ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ರಾಜ್ಯಾಧ್ಯಕ್ಷ ಬಂಡಯ್ಯ ಶಾಸ್ತ್ರಿ ಸುಂಟನೂರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
50 ವರ್ಷಗಳ ಹಿಂದೆಯೇ ಕಲಬುರಗಿಯ ಶರಣಬಸವೇಶ್ವರರ ಪುರಾಣವನ್ನು ಕನ್ನಡ ಮತ್ತು ಸಂಸ್ಕೃತದಲ್ಲಿ ರಚಿಸಿದ ಕೀರ್ತಿ ಪುಟ್ಟರಾಜ ಗುರುಗಳಿಗೆ ಸಲ್ಲುತ್ತದೆ. ಬಸವ ಪುರಾಣ ಹಾಗೂ ಸಿದ್ಧಾಂತ ಶಿಖಾಮಣಿಯನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. 70 ಪುರಾಣಗಳು ಹಾಗೂ 30 ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ, ವೀರೇಶ್ವರ ಪುಣ್ಯಾಶ್ರಮದ ಸಾಧಕರು ಕಲ್ಯಾಣ ಕರ್ನಾಟಕದ ಪ್ರತಿ ಗ್ರಾಮದಲ್ಲೂ ಶರಣಬಸವೇಶ್ವರರ ಪುರಾಣ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಪುಟ್ಟರಾಜ ಗವಾಯಿಗಳು ತ್ರಿಭಾಷಾ ಕವಿಗಳು, ಉಭಯ ಗಾಯನ ವಿಶಾರದರೂ ಹಾಗೂ ಅಂಧ–ಅನಾಥರ ಬಾಳಿಗೆ ಬೆಳಕಾಗಿದ್ದರು. ಆದ್ದರಿಂದ ಶರಣಬಸವೇಶ್ವರ ವಿಶ್ವವಿದ್ಯಾಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.