ADVERTISEMENT

‌‘ಪ್ರಿಯಾಂಕ್‌ ಖರ್ಗೆ ದಾಖಲೆ ಬಿಡುಗಡೆ ಮಾಡಲಿ’

ಬಂಜಾರ ಸಮಾಜ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 14:48 IST
Last Updated 17 ಜೂನ್ 2021, 14:48 IST
ಶಾಮರಾವ್ ರಾಠೋಡ್
ಶಾಮರಾವ್ ರಾಠೋಡ್   

ಚಿಂಚೋಳಿ: ‘ಸಂಸದ ಡಾ. ಉಮೇಶ ಜಾಧವ ಅವರು ಬಂಜಾರ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಕುರಿತು ಅವರು ಯಾವುದೇ ಪ್ರಯತ್ನವನ್ನೂ ನಡೆಸಿ‌ಲ್ಲ. ಈ ಬಗ್ಗೆ ತಮ್ಮ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಬೇಕು‘ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಬಂಜಾರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಉಮೇಶ್‌ ಜಾಧವ ಅವರು ಬಂಜಾರ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಪ್ರಧಾನಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇವೆ. ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದರು.

ಸಂಸದರು ಬಂಜಾರ ಸಮಾಜ ಎಸ್‌ಟಿಗೆ ಸೇರಿಸಲು ಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸಾಬೀತು ಪಡಿಸಬೇಕು. ಇದು ಸಾಬೀತಾದರೆ ಅವರು ರಾಜಕೀಯ ನಿವೃತ್ತಿ ಹೊಂದುತ್ತಾರೆ. ಒಂದು ವೇಳೆ ನೀವು ಸಾಬೀತು ಪಡಿಸದೇ ಹೋದರೇ ನೀವೇನು ಮಾಡುವಿರಿ? ಎಂದು ಪ್ರಿಯಾಂಕ್‌ ಖರ್ಗೆಗೆ ಅವರು ಸವಾಲು ಹಾಕಿದ್ದಾರೆ.

ADVERTISEMENT

ಉಮೇಶ ಜಾಧವ ವಿರುದ್ಧ ಟೀಕೆ ಮಾಡುತ್ತಿರುವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಪ್ರೇರಿತ ಹೇಳಿಕೆಗೆ ಮಹತ್ವವಿಲ್ಲ. ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಕುಟುಂಬದ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕೋಲಿ, ಕುರುಬ ಸಮಾಜದ ಬಗ್ಗೆ ಸಂಸತ್ತಿನಲ್ಲಿ ಒಮ್ಮೆಯೂ ಧ್ವನಿ ಎತ್ತಲಿಲ್ಲ. ಸಂಸದ ಉಮೇಶ ಜಾಧವ ಎರಡು ಬಾರಿ ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಆದರೆ ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನದಲ್ಲಿರುವವರು ಈ ಕುರಿತು ಈಗಲೂ ಪ್ರಸ್ತಾಪ ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ ಎಲ್ಲರೂ ಒಟ್ಟಾಗಿ ಕೋಲಿ, ಕುರುಬ ಸಮಾಜದ ಒಳಿತಿಗಾಗಿ ಹೋರಾಡಬೇಕೆಂದು ಒತ್ತಾಯಿಸಿದ್ದಾರೆ.

ತಾ.ಪಂ. ಮಾಜಿ ಅಧ್ಯಕ್ಷ ಶಾಮರಾವ್ ರಾಠೋಡ್, ಮುಖಂಡರಾದ ಪ್ರೇಮಸಿಂಗ್ ಜಾಧವ, ಅಶೋಕ ಚವ್ಹಾಣ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಪವಾರ, ವಿಜಯಕುಮಾರ ರಾಠೋಡ್, ಶಾದಿಪುರ ಗ್ರಾ.ಪಂ. ಅಧ್ಯಕ್ಷ ರೇಖಾ ರಮೇಶ ರಾಠೋಡ್, ನಾರಾಯಣ ಚವ್ಹಾಣ, ಶಂಕರ ರಾಠೋಡ್, ಭೀಮರಾವ್ ರಾಠೋಡ್, ರಾಜು ಪೆದ್ದಾ ತಾಂಡಾ ಮೊದಲಾದವರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.