ಸಾಂದರ್ಭಿಕ ಚಿತ್ರ
ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಟಿಪ್ಪು ಸುಲ್ತಾನ್ ಬಗ್ಗೆ ಆಕ್ಷೇಪಾರ್ಹ ಘೋಷಣೆ ಕೂಗಿದ ಆರೋಪದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆಕ್ಷೇಪಾರ್ಹ ಘೋಷಣೆಯ ವಿಡಿಯೊ ಆಧರಿಸಿ ಪಟ್ಟಣದ ನಿವಾಸಿಗಳಾದ ಸಚಿನ್ ಬಾಲದಂಡಪ್ಪ (24), ಭೀಮಾಶಂಕರ ಪ್ರಕಾಶ (24), ಶಿವಕುಮಾರ ದೇವಿಂದ್ರಪ್ಪ (26), ಸುನೀಲ್ ಮೌನೇಶ (26) ಹಾಗೂ ಸಿದ್ದು ಮಲ್ಲಿಕಾರ್ಜುನ (20) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಟ್ಟಣದ ತಳವಾರ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆ ಸೆಪ್ಟೆಂಬರ್ 20ರಂದು ಜರುಗಿತು. ಮೆರವಣಿಗೆಯ ವೇಳೆ ಐವರು ಆರೋಪಿಗಳು ಟಿಪ್ಪು ಸುಲ್ತಾನ್ ಬಗ್ಗೆ ಆಕ್ಷೇಪಾರ್ಹ ಘೋಷಣೆ ಕೂಗಿದ ವಿಡಿಯೊ ಹರಿದಾಡಿತು. ಮತೀಯ ಭಾವನೆಗಳಿಗೆ ಧಕ್ಕೆ, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.