ADVERTISEMENT

ಅತ್ಯಾಚಾರ ಖಂಡಿಸಿ ಮೋಂಬತ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:37 IST
Last Updated 14 ಸೆಪ್ಟೆಂಬರ್ 2021, 7:37 IST
ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಸೋಮವಾರ ರಾತ್ರಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮೋಂಬತ್ತಿ ಮೆರವಣಿಗೆ ನಡೆಸಿದರು
ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಸೋಮವಾರ ರಾತ್ರಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮೋಂಬತ್ತಿ ಮೆರವಣಿಗೆ ನಡೆಸಿದರು   

ಕಲಬುರ್ಗಿ: ದೆಹಲಿಯಲ್ಲಿ ನಡೆದ ಪೊಲೀಸ್‌ ಅಧಿಕಾರಿ ಮೇಲಿನ ಅತ್ಯಾಚಾರ, ಕೊಲೆ ಮತ್ತು ಹರ್‍ಯಾಣದ ಫರಿದಾಬಾದ್‌ನಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಕೃತ್ಯಗಳನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷದ ಜಿಲ್ಲಾ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಸೋಮವಾರ ರಾತ್ರಿ ಮೋಂಬತ್ತಿ ಹಿಡಿದು ಮೆರವಣಿಗೆ ನಡೆಸಿದರು.

ಇಲ್ಲಿನ ಸರ್ದಾರ್‌ ವಲ್ಲಭಭಾಯ್ ಪ‍ಟೇಲ್‌ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಹಾಗೂ ಮುಖಂಡರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ‘ಅತ್ಯಾಚಾರಿಗಳನ್ನು ಕೂಡಲೇ ಬಂಧಿಸಬೇಕು, ಉಗ್ರ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ದೆಹಲಿಯ ಸಿವಿಲ್‌ ಡಿಫೆನ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. ದೆಹಲಿ ಸೇರಿ ದೇಶದ ಉದ್ದಗಲಕ್ಕೂ ಮಹಿಳಾ ದೌರ್ಜನ್ಯ ನಿರಂತರ ನಡೆಯುತ್ತಿದೆ.ಈ ಬಾರಿ ಪೊಲೀಸ್‌ ಅಧಿಕಾರಿ ಮೇಲೆಯೇ ಅತ್ಯಚಾರ ನಡೆಸಲಾಗಿದೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲದ ವಾತಾವರಣ ಉಂಟಾಗಿದೆ. ಇದಕ್ಕೆಲ್ಲ ಸರ್ಕಾರದ ಸಡಿಲ ನೀತಿಗಳೇ ಕಾರಣ’ ಎಂದರು.

ADVERTISEMENT

‘ಪೊಲೀಸ್‌ ಅಧಿಕಾರಿಯ ಮೇಲಿನ ಅತ್ಯಾಚಾರ, ಕೊಲೆ ಪ್ರಕಣವನ್ನು ಶೀಘ್ರ ಬೇಧಿಸಬೇಕು. ಇದರ ಹಿಂದೆ ಎಷ್ಟೇ ಪ್ರಭಾವಿಗಳು ಇದ್ದರೂ ಅವರಿಗೆ ಶಿಕ್ಷೆ ಕೊಡಿಸಬೇಕು. ಕೇಂದ್ರದ ಸಚಿವರು ಈ ಬಗ್ಗೆ ಬಾಯಿ ಬಿಡಬೇಕು. ಅತ್ಯಾಚಾರ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು’ ಎಂದೂ ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಜಗದೀಶ ಬಳ್ಳಾರಿ, ಸಹ ಸಂಚಾಲಕ ಸೈಯದ್‌ ಬಾಬರ್‌ ಮುಸ್ತಾಫಾ, ಶೇಖರ ಸಿಂಗ್, ಕಿರಣ ರಾಠೋಡ, ಮಿರಮೊಹಸಿನ್‌, ಸಂಜೀವಕುಮಾರ, ವಿಜಯಕುಮಾರ, ಉದಯ ಬಳ್ಳಾರಿ, ಸಜ್ಜಾದ್‌ ಅಲಿ, ಪ್ರಮೋದ, ಇಮರಾನ್ ಅಹಮದ್‌ ಮತ್ತು ಕಾರ್ಯಕರ್ತರು ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.