ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿಸಿ ಇದೇ 24ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಜನಾಂದೋಲನ’ದ ಗೌರವ ಅಧ್ಯಕ್ಷ ಮಾರುತಿ ದೊಡ್ಡಮನಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರ್ಗಿಯ ನಗರೇಶ್ವರ ಶಾಲೆಯಿಂದ ಹೊರಟು ಜಗತ್ ವೃತ್ತದ ಬಳಿ ಜನರು ಸಮಾವೇಶಗೊಳ್ಳಲಿದ್ದಾರೆ. ನಂತರ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು’ ಎಂದರು.
ತಾಲ್ಲೂಕುಗಳಲ್ಲಿ ಜಾಗೃತಿ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಯೂ ಈ ಬಗ್ಗೆ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಜ 10ರಂದು ಆಳಂದ, 12ರಂದು ಅಫಜಲಪುರ, 13ರಂದು ಜೇವರ್ಗಿ ಮತ್ತು ಯಡ್ರಾಮಿ, 14ರಂದು ಶಹಾಬಾದ್, 15ರಂದು ಚಿತ್ತಾಪೂರ ಮತ್ತು ಕಾಳಗಿ, 16ರಂದು ಸೇಡಂ, 17ರಂದು ಚಿಂಚೋಳಿ, 18ರಂದು ಕಮಲಾಪೂರದಲ್ಲಿ ಸಭೆ ನಡೆಸಲಾಗುವುದು. ಈ ಅಭಿಯಾನದಲ್ಲಿ ಜಿಲ್ಲೆಯ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಜನಾಂದೋಲನ ಸಮಿತಿಯಲ್ಲಿ ಸಲಹೆಗಾರರಾಗಿ ಆರ್.ಕೆ.ಹುಡಗಿ, ಡಿ.ಜಿ.ಸಾಗರ, ಬಸಣ್ಣ ಸಿಂಗೆ, ಮಲ್ಲೇಶಿ ಸಜ್ಜನ, ಬಿ.ಬಿ.ರಾಂಪುರೆ, ಅಧ್ಯಕ್ಷೀಯ ಮಂಡಳಿಯಲ್ಲಿ ಭೀಮಣ್ಣ ಸಾಲಿ, ತಿಪ್ಪಣ್ಣ ವಡೆಯರಾಜ, ಸುಭಾಷ್ ರಾಠೋಡ, ಶರಣು ಸುಬೇದಾರ, ಪಿ.ಎಸ್.ಮಹಾಗಾಂವಕರ, ರವಿ ಕೊರವಿ, ಅಣ್ಣಾರಾವ ಹಡಪದ, ಶ್ಯಾಮ ನಾಟೇಕರ, ಆಕಾಶ ಉಪಾಧ್ಯಾಯಮ ತಿಪ್ಪಣ್ಣ ಬಳಬಟ್ಟಿ, ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.