ಕಲಬುರ್ಗಿ: ಹಿಂದುಳಿದ ವರ್ಗಗಳ ಇಲಾಖೆಯಿಂದ ಸಾಲ ಕೊಡಿಸುವುದಾಗಿ ದಿನಪತ್ರಿಕೆ ವರದಿಗಾರ ಸಿದ್ದಪ್ಪ ಶರಣಪ್ಪ ಅವರನ್ನು ನಂಬಿಸಿ ಅವರಿಂದ ಅರ್ಜಿ ಪಡೆದು, ನಕಲಿ ಬ್ಯಾಂಕ್ ಖಾತೆ ಮೂಲಕ ₹ 17,800 ಲಪಟಾಯಿಸಿದ್ದ ಆರೋಪಿಗಳಿಗೆ ಇಲ್ಲಿ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿದೆ.
ಮೃತ ಆರೋಪಿ ಲೋಕೇಶ, ಬಿ. ಅಮರನಾಥ, ಚಂದ್ರಕಾಂತ, ಮಲ್ಲಿಕಾರ್ಜುನ ಹಾಗೂ ಶಶಿಕಾಂತ ಎಂಬುವವರೇ ವಂಚನೆ ಮಾಡಿದ ಆರೋಪಿಗಳು. ಸಿದ್ದಪ್ಪ ಅವರ ಖಾತೆಗೆ ₹ 2400 ಜಮಾ ಮಾಡಿ, ಉಳಿದ ಹಣವನ್ನು ನಕಲಿ ಖಾತೆ ಮೂಲಕ ಪಡೆದು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಸ್ಟೇಶನ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಾದ ವಿವಾದ ಆಲಿಸಿದ ನ್ಯಾಯಾಧೀಶ ಸುಕಲಾಕ್ಷ ಪಾಲನ್ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.