ಕಲಬುರಗಿ: ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಬಿಸಿಗಾಳಿ ಬೀಸುವ ಪ್ರಮಾಣ ಕೊಂಚ ಕಡಿಮೆಯಾಗಿ, ವಾತಾವರಣ ತಂಪಾಯಿತು.
ನಗರದ ಸಾರಿಗೆ ಸದನ, ಹಳೇ ಜೇವರ್ಗಿ ಅಂಡರ್ ಪಾಸ್, ಕುಸನೂರ ರಸ್ತೆ, ತಾರಪೈಲ್ ಬಡಾವಣೆಯ ಮುಖ್ಯರಸ್ತೆ, ಜನತಾ ಕಾಲೊನಿ ಸೇರಿ ವಿವಿಧೆಡೆ ರಸ್ತೆಗಳಲ್ಲಿ ನೀರು ಕಟ್ಟಿಕೊಂಡಿತು.ಬಿದ್ದಾಪುರ ಕಾಲೊನಿ, ಶಕ್ತಿನಗರ, ಗಂಗಾನಗರ, ಪ್ರಶಾಂತನಗರ,ಪಿ ಅಂಡ್ ಟಿ ಕಾಲೊನಿ, ಕೆಎಚ್ಬಿ ಕಾಲೊನಿ, ಶಹಾಬಜಾರ್, ಕೋರ್ಟ್ ರಸ್ತೆ ಸೇರಿ ಎಲ್ಲಾ ಕಡೆ ಮಳೆಯಾಯಿತು.
ಆಲಿಕಲ್ಲು ಮಳೆ
ಕಮಲಾಪುರ:ತಾಲ್ಲೂಕಿನ ತಡಕಲ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಿತು.ಗಾಳಿ ರಭಸಕ್ಕೆ ಗ್ರಾಮದ ಕೆಲ ವಿದ್ಯುತ್ ಕಂಬಗಳು ಉರುಳಿದವು.
ಮಳೆ ಸುರಿಯುವಾಗಲೇ ವಿದ್ಯುತ್ ಕಂಬವೊಂದು ಮನೆ ಮೇಲೆ ವಾಲಿತು. ತಕ್ಷಣ ಗ್ರಾಮದ ಯುವಜನರು ಜೆಸ್ಕಾಂಗೆ ಕರೆ ಮಾಡಿ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಿದರು. ಇದರಿಂದ ಸಂಭವನೀಯ ಅಪಾಯ ತಪ್ಪಿತು ಗ್ರಾಮಸ್ಥ ಶಿವಕುಮಾರ್ ವಿ. ಪಾಟೀಲ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.