ಕಲಬುರಗಿ: ಬಹು ಸಂಸ್ಕೃತಿಯ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೃಶ್ಯ ವಿಧಾನಗಳ ಮೂಲಕ ಸಂವಹನ ಸಾಧ್ಯತೆಗೆ ಸಾಕಷ್ಟು ಅವಕಾಶಗಳಿವೆ. ವೈವಿಧ್ಯತೆಯ ಕಲಾಕೃತಿಗಳನ್ನು ರಚಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕು’ ಎಂದು ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾ ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಟಿ. ಎನ್ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ರಂಗಾಯಣದಲ್ಲಿ ಭಾನುವಾರ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಿಂಗಳ ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸತ್ಯ ಘಟನೆಗಳು ಮತ್ತು ಸಮಕಾಲೀನ ಸಂಗತಿಗಳನ್ನು ಕಲಾವಿದರು ತಮ್ಮ ನೈಪುಣ್ಯತೆಯಿಂದ ಮಾತ್ರ ಪ್ರತಿಬಿಂಬಿಸಲು ಸಾಧ್ಯ. ಸಾಹಿತ್ಯವನ್ನು ಅರಿತು ಸಿನಿಮಾ, ಜಾಹೀರಾತು, ಭೂಪಟ, ಛಾಯಾಚಿತ್ರ, ಚಿತ್ರಗಳಂತಹ ಕಲೆಯ ಮೂಲಕ ಅಭಿವ್ಯಕ್ತಿಪಡಿಸಬೇಕು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಮಾತನಾಡಿ, ‘ಈ ಭಾಗದಲ್ಲಿ ಅತ್ಯುತ್ತಮ ಕಲಾವಿದರು ಇದ್ದಾರೆ. ತಮ್ಮ ಕಲಾ ಸಾಮರ್ಥ್ಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಈ ಭಾಗಕ್ಕೆ ಮೆರಗು ತಂದಿದ್ದಾರೆ’ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ಭವ್ಯ ಸಂಸ್ಕೃತಿ, ಪರಂಪರೆ ಇರುವ ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಕಲಾ ಗ್ಯಾಲರಿ ನಿರ್ಮಾಣ ಆಗಬೇಕು. ಇದರಿಂದ ಕಲಾವಿದರಿಗೆ ಮತ್ತಷ್ಟು ಅವಕಾಶ ಸಿಗಲಿವೆ. ಅದಕ್ಕಾಗಿ ಇಲ್ಲಿನ ಕಲಾ ತಜ್ಞರು, ಕಲಾವಿದರು ಪ್ರಯತ್ನಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.