ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮದ ಒಂದನೇ ವಾರ್ಡಿನಲ್ಲಿ ಹನುಮಾನ ದೇವಸ್ಥಾನದ ಹತ್ತಿರದ ಸುಮಾರು 200 ವರ್ಷಗಳ ಇತಿಹಾಸವುಳ್ಳ, ಅಂದಾಜು ನೂರು ಅಡಿ ಆಳದ ಬಾವಿ ತುಂಬಿಕೊಂಡರೆ ಗ್ರಾಮದ ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇತರ ಸಣ್ಣಪುಟ್ಟ ಬಾವಿಗಳಲ್ಲೂ ನೀರು ತುಂಬಿಕೊಳ್ಳುತ್ತದೆ. ಅಂತಹ ಬಾವಿಯ ಹೂಳು ತೆಗೆಯುವ ಕೆಲಸವನ್ನು ಗ್ರಾಮ ಪಂಚಾಯಿತಿಯವರು ನರೇಗಾ ಯೋಜನೆ ಅಡಿಯಲ್ಲಿ ಆರಂಭಿಸಿದ್ದಾರೆ.
ಗ್ರಾಮದಲ್ಲಿ ವಿವಿಧ ಯೋಜನೆ ಅಡಿಯಲ್ಲಿ 100ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಗ್ರಾಮದಲ್ಲಿ ನಾಲ್ಕು ಕೆರೆಗಳು ಹಾಗೂ ಐದಾರು ತೆರೆದ ಬಾವಿಗಳಿವೆ. ಆದರೆ ಅವುಗಳಲ್ಲಿ ಈಗ ನೀರು ಖಾಲಿಯಾಗಿದೆ. ಪುರಾತನ ಬಾವಿಯು ದೊಡ್ಡದಿದ್ದು ಹೂಳು ತುಂಬಿಕೊಂಡಿದೆ. ಅದರ ಸುತ್ತಮುತ್ತ ಕಂಟಿಗಳು ಬೆಳೆದಿವೆ.
ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಚಂದಪ್ಪ ಹಾವಳಗಿ, ಉಪಾಧ್ಯಕ್ಷ ಬಸವರಾಜ ಪಾರಗೊಂಡ ಹಾಗೂ ಸದಸ್ಯರ ಸಲಹೆ ಮೇರೆಗೆ ಅಭಿವೃದ್ಧಿ ಅಧಿಕಾರಿ ರಮೇಶ ಪಾಟೀಲ ಹಾಗೂ ಕಾರ್ಯದರ್ಶಿ ನಿಂಗಗೊಂಡ ದೇವಣಗಾಂವ್ ಅವರು ಕೆರೆಗೆ ಮರುಜೀವ ಕೊಡುವ ಕಾಮಗಾರಿಯನ್ನು ನರೇಗಾದಲ್ಲಿ ಆರಂಭಿಸಿದ್ದಾರೆ. ಸದ್ಯಕ್ಕೆ ಅಲ್ಲಿ 30 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಪುರಾತನ ಅಥವಾ ಪಾಳುಬಿದ್ದ ಬಾವಿಗಳ ದುರಸ್ತಿ ಕೆಲಸವನ್ನು ಮಾಡಲು ನರೇಗಾ ಅನುದಾನದಲ್ಲಿ ಅವಕಾಶ ಇರುವುದರಿಂದ ಗ್ರಾಮದಲ್ಲಿ ಇಂತಹ ಕೆಲಸ ಮಾಡಲು ಅನುಕೂಲವಾಗಿದೆ. ನರೇಗಾದಡಿ ಸಾರ್ವಜನಿಕ ಬಾವಿಗಳ ಮತ್ತು ಕೆರೆಗಳ ಹೂಳೆತ್ತುವ ಕೆಲಸ ಮಾಡಲಾಗುತ್ತದೆ. ಇದರಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ಗ್ರಾ.ಪಂ ಸದಸ್ಯರಾದ ರಾವುತಪ್ಪ ಗೌಡಗಾಂವ್, ದತ್ತಪ್ಪ ಟೆಂಗಳೆ, ಮಲ್ಲಿಕಾರ್ಜುನ ಸಣ್ಣದಾನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.