ADVERTISEMENT

ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 14:26 IST
Last Updated 25 ಜನವರಿ 2022, 14:26 IST
ಕಮಲಾಪುರ ತಾಲ್ಲೂಕಿನ ಮಹಾಗಾಂವ ಕಳ್ಳಿಮಠದಲ್ಲಿ ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿದರು
ಕಮಲಾಪುರ ತಾಲ್ಲೂಕಿನ ಮಹಾಗಾಂವ ಕಳ್ಳಿಮಠದಲ್ಲಿ ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿದರು   

ಕಮಲಾಪುರ: ಗುರುಲಿಂಗ ಶಿವಾಚಾರ್ಯರು ಲಿಂಗೈಕ್ಯರಾದ ಬಳಿಕ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ವಿರೂಪಾಕ್ಷ ದೇವರು (ಆದಿತ್ಯ ಶಿವಚಾರ್ಯ)ರ ಸಾರಥ್ಯದಲ್ಲಿ ಈ ಕಳ್ಳಿಮಠ ಎತ್ತರಕ್ಕೆ ಬೆಳೆಯಲಿ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ಮಹಾಗಾಂವ ಕಳ್ಳಿಮಠದಲ್ಲಿ ಲಿಂಗೈಕ್ಯ ಗುರುಲಿಂಗ ಶೀವಾಚಾರ್ಯರ ಶಿವಗಣರಾಧನೆ ನಿಮಿತ್ತ ಬುಧವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅನೇಕ ಕಾರ್ಯಗಳನ್ನು ಕೈಗೊಂಡ ಗುರುಲಿಂಗ ಶಿವಾಚಾರ್ಯರು ಮಠ ಹಾಗೂ ಗ್ರಾಮದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದ್ದಾರೆ. ನಮ್ಮೆಲ್ಲರ ಹೃದಯದ ಚೈತನ್ಯ ಶಕ್ತಿಯಾಗಿದ್ದಾರೆ. ನೂತನ ಉತ್ತರಾಧಿಕಾರಿಗೆ ಸಹಕಾರ ನೀಡಿ ಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೊಯ್ಯೋಣ ಎಂದರು.

ADVERTISEMENT

ಆಂದೋಲದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಗುರುಲಿಂಗ ಶಿವಾಚಾರ್ಯರು ಸಾತ್ವಿಕ ಸಂತರಾಗಿದ್ದರು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಆದರ್ಶವಾದ ಬ್ರಹ್ಮಚರ್ಯ ಪಾಲಿಸಿ ಸಾಮಾಜಿಕ ಏಳಿಗೆಗೆ ಶ್ರಮಿಸಿದ. ಧರ್ಮದ ಜೊತೆಗೆ ದೇಶಾಭಿಮಾನದ ಬೀಜ ಬಿತ್ತಿದ ಗುರುಲಿಂಗ ಶಿವಾಚಾರ್ಯರು ನಮಗೆಲ್ಲ ಆದರ್ಶ ಎಂದರು.

ಶಿವಕವಿ ಜೋಗೂರು ಮಾತನಾಡಿ, ಮಹಾಗಾಂವದ ಕಳ್ಳಿಮಠ ಪಿತ್ರವರ್ಗದ ಮಠವಾಗಿದೆ. ಲಿಂಗೈಕ್ಯರಾದ ಸ್ವಾಮೀಜಿಗಳ ಸಂಬಂಧಿಕರನ್ನೆ ಉತ್ತರಾಧಿಕಾರಿನ್ನಾಗಿ ನೇಮಕ ಮಾಡಿಕೊಳ್ಳಬೇಕು. 18 ವರ್ಷದ ವರಗೆ ಉತ್ತರಾಧಿಕಾರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಅಂಗವೈಕಲ್ಯ ಅಥವಾ ಯಾವುದೇ ರೀತಿಯ ಭಿನ್ನರಾಗದಂತೆ ನಿಗವಾಹಿಸಬೇಕು ಎಂದರು.

ಸಾವಿರ ವಚನ ರಚಿಸಿದ ಗುರುಲಿಂಗ ಶಿವಾಚಾರ್ಯ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದರು. ಮಹಾಕವೀಶ ಅವರ ಕಾವ್ಯನಾಮವಾಗಿದೆ. ಮಠದ ಬೇಳವಣಿಗೆ ಪವಾಡವಲ್ಲ ಗುರುಲಿಂಗ ಶಿವಾಚಾರ್ಯ ಕ್ರಿಯಾಶೀಲತೆಯ ಪ್ರತೀಕ ಎಂದು ತಿಳಿಸಿದರು.

ಲಿಂಗೈಕ್ಯ ಗುರುಲಿಂಗ ಶೀವಾರ್ಯ ಕರ್ತೃಗದ್ದುಗೆ ಅಭಿಶೇಕ, ಬಿಲ್ವಾರ್ಚನೆ, ಪುಷ್ಟಾರ್ಚನೆ ಶಿವಗಣಾರಾಧನೆ ನಂತರ ನುಡಿ ನಮನ ಕಾರ್ಯಕ್ರಮ ನಡೆಯಿತು.

ಮಹಾಗಾಂವ ವಿರಕ್ತಮಠದ ಸಿದ್ದಲಿಂಗ ಪಟ್ಟದೇವರು, ಪಾಳಾದ ಗುರುಮೂರ್ತಿ ಶಿವಾಚಾರ್ಯ, ಚೌಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯ, ನಾದ ಅಮೀನಗಡದ ಶಿವಾನಂದ ಶಿವಾಚಾರ್ಯ, ಲಾಡ ಮುಗಳಿ ಅಭಿನವ ಸಿದ್ದಲಿಂಗ ಶ್ವಾಮೀಜಿ, ಶ್ರೀನಿವಾಸ ಸರಡಗಿಯ ಅಪ್ಪರಾವ ಮುತ್ಯಾ, ಶಾಸಕ ಬಸವರಾಜ ಮತ್ತಿಮಡು, ಜಿ.ಪಂ. ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಶ್ರೀಕಾಂತ ಪಾಟೀಲ, ಮಲ್ಲಿಕಾರ್ಜುನ ಮರತೂರ, ಗಿರೀಶ ಪಾಟೀಲ, ರೇವಣಸಿದ್ದಪ್ಪ ನಿಂಬಾಜಿ ಧಮ್ಮೂರ, ಅನೀಲಕುಮಾರ ಕೋರೆ, ಬಸವರಾಜ ಗೌಡನೂರ, ಶರಣಬಸಪ್ಪ ಬಾಳಿ, ಶಿವಕುಮಾರ ಕಳ್ಳಿಮಠ, ನಾಗೇಂದ್ರಯ್ಯ ಕಳ್ಳಿಮಠ, ರಾಜಕುಮರ ಬೆಳ್ಳೂರ್ಗೆ, ರಾಜು ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.