ಕಾಳಗಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕೋಡ್ಲಿ ಕ್ರಾಸ್ - ಮಹಾಗಾಂವ ಕ್ರಾಸ್ ನಡುವೆ ರಾಜ್ಯ ಹೆದ್ದಾರಿ-32 ಅಲ್ಲಲ್ಲಿ ಹದಗೆಟ್ಟು ಹೋಗಿದೆ. ದುರಸ್ತಿ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಈ ಹೆದ್ದಾರಿಯಲ್ಲಿ ಹುಲಸಗೂಡ ಕ್ರಾಸ್, ಕಂದಗೂಳ ಕ್ರಾಸ್, ರಟಕಲ್, ಹೇರೂರ ಕ್ರಾಸ್, ಸುಗೂರ ಕ್ರಾಸ್ ಮುಂತಾದ ಕಡೆಗಳಲ್ಲಿತಗ್ಗು ಗುಂಡಿಗಳು ಬಿದ್ದಿವೆ. ಹೆದ್ದಾರಿ ಎಲ್ಲೆಂದರಲ್ಲಿ ಕಿತ್ತು ಹೋಗಿ ಜಲ್ಲಿಕಲ್ಲು ಹರಡಿಕೊಂಡಿವೆ.
ಒಂದು ಕಾಲಕ್ಕೆ ಪ್ರತಿಷ್ಠಿತ ಹೆದ್ದಾರಿ ಎನಿಸಿಕೊಂಡ ಈ ರಸ್ತೆ ಮೂಲಕವೇ ಹುಮನಾಬಾದ್, ಕಲಬುರ್ಗಿ, ಆಳಂದ, ಬಸವಕಲ್ಯಾಣ ಪ್ರಯಾಣಿಕರು ಚಿಂಚೋಳಿ ಕಡೆಗೆ ಬರುತ್ತಿದ್ದರು.
ಆದರೆ, ಈಚೆಗೆ ಹೆದ್ದಾರಿ ಪೂರ್ತಿ ಹಾಳಾಗಿದೆ. ಹೆದ್ದಾರಿ ಮೇಲ್ವಿಚಾರಣೆ ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ, ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ವಾರಕ್ಕೊಮ್ಮೆಯಾದರೂ ಈ ಮಾರ್ಗದಲ್ಲಿ ಓಡಾಡುತ್ತಾರೆ. ಆದರೆ, ಯಾರೊಬ್ಬರು ಈ ಬಗ್ಗೆ ತಲೆಕೆಡಿಕೊಳ್ಳುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ.
‘ಈ ಹೆದ್ದಾರಿ ಸುಧಾರಣೆಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ ಚಳವಳಿ ನಡೆಸುತ್ತೇವೆ’ ಎಂದು ಪ್ರಾಂತ ರೈತ ಸಂಘದ ಮುಖಂಡ ಗುರುನಂದೇಶ ಕೋಣಿನ, ರಟಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೌರಿಶಂಕರ ಕಿಣ್ಣಿ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.