ADVERTISEMENT

ಕೈದಿಗಳ ದಿನಗೂಲಿ ₹ 100ಕ್ಕೆ ಏರಿಕೆ

ಕೇಂದ್ರ ಕಾರಾಗೃಹದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಕಲಿಕಾ ಕೇಂದ್ರ ಉದ್ಘಾಟಿಸಿದ ಪಿ.ಎಸ್‌.ರಮೇಶ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 14:25 IST
Last Updated 4 ಅಕ್ಟೋಬರ್ 2019, 14:25 IST
ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ನಡೆದ ಸಾಕ್ಷರತಾ ದಿನಾಚರಣೆಯಲ್ಲಿ ಗಣ್ಯರು ಕೈದಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು
ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ನಡೆದ ಸಾಕ್ಷರತಾ ದಿನಾಚರಣೆಯಲ್ಲಿ ಗಣ್ಯರು ಕೈದಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು   

ಕಲಬುರ್ಗಿ: ‘ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಡುಗೆ ಕೋಣೆ, ಪಾತ್ರೆ ಸ್ವಚ್ಛತೆ, ಕೃಷಿ ಚಟುವಟಿಕೆಗೆ ನೀಡಲಾಗುವ ಕೈದಿಗಳ ದಿನಗೂಲಿಯನ್ನು ಅಕ್ಟೋಬರ್‌ 1ರಿಂದಲೇ ₹ 100ಕ್ಕೆ ಏರಿಸಲಾಗಿದೆ’ ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ 54ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೈದಿಗಳಿಗೆ ಮೊದಲು ದಿನಕ್ಕೆ ₹ 75 ನೀಡಲಾಗುತ್ತಿತ್ತು. ಈಗ ₹ 25 ಹೆಚ್ಚಳ ಮಾಡಿದ್ದರಿಂದ ಒಟ್ಟು ದಿನಕ್ಕೆ ₹ 100 ಕೂಲಿ ಸಿಗಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ರಾಷ್ಟ್ರಮಟ್ಟದಲ್ಲಿ ಸಾಕ್ಷರತಾ ಪ್ರಮಾಣ ಶೇಕಡ 74ರಷ್ಟು ಇದ್ದರೇ ಜಿಲ್ಲೆಯಲ್ಲಿ ಶೇಕಡ 65ರಷ್ಟಿದೆ. ಇದು ಮುಂದಿನ ದಿನಗಳಲ್ಲಿ ಶೇಕಡ 100 ರಷ್ಟು ಆಗಬೇಕು. ಈ ಕಾರಾಗೃಹದಲ್ಲಿ ಮೊದಲನೇ ಹಂತದಲ್ಲಿ 25 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು 25 ಕಲಿಕಾ ಕೇಂದ್ರಗಳಿಗೆ ಚಾಲನೆ ನೀಡಲಾಗಿದ್ದು, ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಶಿರಸಗಿ ರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಾಲಾಜಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಮಾತನಾಡಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಮಿತಿ ಅಧ್ಯಕ್ಷ ಶರಣಗೌಡ ಪಾಟೀಲ ಸಾಕ್ಷರತ ಪ್ರಮಾಣ ಬೋಧಿಸಿ ನಂತರ ಭಿತ್ತಿ ಪತ್ರ ಬಿಡುಗಡೆ ಮಾಡಿದರು. ಅಧೀಕ್ಷಕ ಐ.ಜೆ.ಮ್ಯಾಗೇರಿ, ಸಾಕ್ಷರತಾ ಸಂಯೋಜಕಿ ಅರ್ಚನಾ ಮಾಡ್ಯಾಳಕರ್, ಉಪನ್ಯಾಸಕಿ ಶಾಂತಾ ಬಿ.ರಾವ ಉಪನ್ಯಾಸ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಶಿವಲಿಂಗ ತೇಲಕರ್, ಬಸವರಾಜ ಜೇವರ್ಗಿ, ಸುನಿತಾ ರಾಠೋಡ, ಪ್ರಿಯಾ ವಗ್ಗನ್, ಸಂಯೋಜಕ ಮಲ್ಲಯ್ಯ ಹಿರೇಮಠ ಆಳಂದ, ಪ್ರಕಾಶ ಕಟ್ಟಿಮನಿ ಚಿತ್ತಾಪುರ, ಪ್ರಭು ಜಾಧವ, ಮುರುಗೇಂದ್ರ ಮಸಳಿ,ಲಕ್ಷ್ಮಿಪುತ್ತ ಜೇವರ್ಗಿ, ಬಬು ಚವ್ಹಾಣ ಚಿಂಚೋಳಿ, ಸುರೇಶ ಸೇಡಂ, ಗೋಪಾಲ ರಾಠೋಡ ಇದ್ದರು.

2018-19ನೇ ಸಾಲಿನಲ್ಲಿ ನಗರ ಮತ್ತು ಕೊಳಚೆ ಪ್ರದೇಶದಲ್ಲಿ ಸಾಕ್ಷರತಾ ಕಾರ್ಯಕ್ರಮದಲ್ಲಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದ ಬೋಧಕರಿಗೆ ಉತ್ತಮ ಬೋಧಕರೆಂದು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮಲ್ಲಯ್ಯ ಹಿರೇಮಠ ಸಾಕ್ಷರ ಗೀತೆ ಹಾಡಿದರು. ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.