ಪ್ರಾತಿನಿಧಿಕ ಚಿತ್ರ
ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕ್ಯಾಂಟೀನ್ ಗುತ್ತಿಗೆದಾರ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯು ವಿವಿಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.
‘ಕ್ಯಾಂಟೀನ್ ನಡೆಸುವ ಗುತ್ತಿಗೆದಾರ ಆದಿಕೇಶವುಲು ಅವರೊಂದಿಗೆ ಮಾತನಾಡಲು ಅರ್ಥಶಾಸ್ತ್ರ ವಿಭಾಗದ ನನ್ನ ಚಿಕ್ಕಪ್ಪನ ಜತೆಗೆ ಕ್ಯಾಂಟೀನ್ಗೆ ತೆರಳಿದ್ದೆ. ಕ್ಯಾಂಟೀನ್ ಭರ್ತಿ ಆಗಿದ್ದರಿಂದ ಕೋಣೆಯೊಳಗೆ ಬರುವಂತೆ ಹೇಳಿ ಕರೆದೊಯ್ದರು. ಕೋಣೆಯಲ್ಲಿ ಮಾತನಾಡಿ ಹೊರಗೆ ಬರುವಾಗ ಆದಿಕೇಶವುಲು ಅವರು ಕೆನ್ನೆಗೆ ಮುತ್ತಿಟ್ಟರು. ಈ ಬಗ್ಗೆ ಪ್ರಶ್ನಿಸಿದಾಗ, ‘ನೀನು ನನ್ನ ಮಗಳಿದ್ದಂತೆ’ ಎಂದು ಪ್ರತಿಕ್ರಿಯಿಸಿದರು’ ಎಂದು ವಿದ್ಯಾರ್ಥಿನಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ವಿವಿಯ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್, ‘ಕ್ಯಾಂಟೀನ್ ಗುತ್ತಿಗೆದಾರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗಕ್ಕೆ ದೂರು ಸಲ್ಲಿಕೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿಯನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.