ಕಲಬುರಗಿ: ಗುರುವಾರ ವಿಧಿವಶರಾದ ಶರಣ ಬಸವೇಶ್ವರರ ಮಹಾ ಸಂಸ್ಥಾನದ ಎಂಟನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ 'ಮಂತ್ರ ಶರೀರಕ್ಕೆ ' ಗಣ್ಯರು ಭಕ್ತರು, ಹಣೆಮಣಿದು, ಬಿಲ್ವಪತ್ರೆ, ಪುಷ್ಪಹಾರ ಅರ್ಪಿಸಿ ಗೌರವ ಸಲ್ಲಿಸುತ್ತಿದ್ದಾರೆ. ವಿವಿಧ ಸ್ವಾಮೀಜಿಗಳು ಆರತಿ ಬೆಳಗಿ, ನುಡಿನಮನ ಸಲ್ಲಿಸಿ ಗೌರವ ಅರ್ಪಿಸುತ್ತಿದ್ದಾರೆ.
ಹೊತ್ತು ತಿರುಗಿದಂತೆ ಭಕ್ತರ ಬರುವಿಕೆ ಹೆಚ್ಚುತ್ತಿದ್ದು, ಬ್ಯಾರಿಕೇಡಗಳನ್ನು ಹಾಕಿ ದರ್ಶನಕ್ಕೆ ಮೂರು ಸರದಿ ಸಾಲುಗಳ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೇ ಗಣ್ಯರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸಚಿವ ಶರಣ ಬಸಪ್ಪ ದರ್ಶನಾಪುರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಸಾವಿರಾರು ಭಕ್ತರು ದರ್ಶನ ಪಡೆದಿದ್ದಾರೆ.
ಭಜನೆ, ಗಾಯನ: ವೇದಿಕೆಯಲ್ಲಿ ವಚನಗಳ ಗಾಯನ, ಜನಪದ ಹಾಡುಗಳ ಗಾಯನ, ಭಕ್ತಿಗೀತೆಗಳ ಅನುರಣಿಸಿದವು.
ಶರಣಬಸವಪ್ಪ ಅಪ್ಪ ಅಂತಿಮ ದರ್ಶನಕ್ಕೆ ಹರಿದು ಬಂದ ಭಕ್ತರು
ಗುರುವಾರ ರಾತ್ರಿ ನಿಧನರಾದ ಇಲ್ಲಿನ ಶರಣಬಸವೇಶ್ವರ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಪಾರ್ಥಿವ ಶರೀರವನ್ನು ಶರಣಬಸವೇಶ್ವರ ದೇವಸ್ಥಾನದ ಪಕ್ಕದ ಮಂಟಪದಲ್ಲಿ ಇರಿಸಲಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ.
ಕೆಲವರು ಬರಿಗಾಲಿನಲ್ಲೇ ನಡೆಯುತ್ತಾ ಬಂದು ದರ್ಶನ ಪಡೆದರು.
ಭಕ್ತರಿಗಾಗಿ ಮೂರು ಸಾಲುಗಳ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಬೆಳಿಗ್ಗೆಯಿಂದಲೇ ಸರಾಗವಾಗಿ ತೆರಳಿ ದರ್ಶನ ಪಡೆಯುತ್ತಿದ್ದಾರೆ.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಬಳಿ ಭಕ್ತರು ಶರಣಬಸವಪ್ಪ ಅಪ್ಪ ಅವರ ಅಂತಿಮ ದರ್ಶನಕ್ಕೆ ಭಜನೆ ಮಾಡುತ್ತಾ ಬಂದರು
ಕಲಬುರಗಿ ಸುತ್ತಮುತ್ತಲಿನ ಭಕ್ತರು ಭಜನೆ ಮಾಡುತ್ತಾ ಮೆರವಣಿಗೆಯಲ್ಲಿ ಬಂದು ಶರಣಬಸವಪ್ಪ ಅಪ್ಪ ಅವರ ಅಂತಿಮ ದರ್ಶನ ಪಡೆದರು.
ವಿವಿಧ ಮಠಗಳ ಮಠಾಧೀಶರು ಮಾತನಾಡಿ ಅಪ್ಪ ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ 5ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.
ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಂತಿಮ ದರ್ಶನ ಪಡೆಯಲಿದ್ದಾರೆ.
ಶರಣಬಸವಪ್ಪ ಅಪ್ಪ ಅವರ ಪತ್ನಿ ದಾಕ್ಷಾಯಣಿ ಎಸ್. ಅಪ್ಪ, ಪುತ್ರ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಅಪ್ಪ ಅವರ ಪುತ್ರಿಯರು, ಕುಟುಂಬ ಸದಸ್ಯರು ಸ್ಥಳದಲ್ಲಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.