ಕೊಪ್ಪಳ: ಮತದಾನ ಮಾಡುವ ವೇಳೆ ಮೊಬೈಲ್ನಲ್ಲಿ ಫೋಟೊ ಕ್ಲಿಕ್ಕಿಸಿ, ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೂವರು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಕನೂರು ತಾಲ್ಲೂಕು ದ್ಯಾಂಪುರ ಗ್ರಾಮದ ಮಂಜುನಾಥ ಮರಡಿ, ಕಾರಟಗಿ ತಾಲ್ಲೂಕು ಬೂದಗುಂಪಾ ಗ್ರಾಮದ ಮಲ್ಲಯ್ಯ ಸಣ್ಣಹನಮಂತಪ್ಪ ಹಾಗೂ ಚಳ್ಳೂರು ಗ್ರಾಮದ ರಾಘವೇಂದ್ರ ಹನಮಂತಯ್ಯ ಚಟ್ಟಿ ಬಂಧಿತರು.
‘ಮತಗಟ್ಟೆ ಸಂಖ್ಯೆ 180ಕ್ಕೆ ಬಂದಿದ್ದ ಮಂಜುನಾಥ, ಸಿಬ್ಬಂದಿಗೆ ಗೊತ್ತಾಗದ ಹಾಗೆ ಮೊಬೈಲ್ ಅನ್ನು ಒಳಗೆ ತೆಗೆದುಕೊಂಡು ಹೋಗಿದ್ದ. ತಾನು ಮತ ಹಾಕಿದ ರೀತಿಯನ್ನು ವಿಡಿಯೊ ಮಾಡುತ್ತಿದ್ದ. ತುಂಬ ಹೊತ್ತಾದರೂ ಯುವಕ ಹೊರಬಾರದ್ದನ್ನು ಕಂಡು ಅಧಿಕಾರಿಗಳು ಸ್ಥಳಕ್ಕೆ ಹೋದರು. ವಿಡಿಯೊ ಮಾಡುವುದನ್ನು ಗಮನಿಸಿ ಆತನನ್ನು ಹೊರಕ್ಕೆ ಕರೆತಂದರು. ಮತಯಂತ್ರದಿಂದ ತುಸು ದೂರ ಬಂದ ಯುವಕ ತಕ್ಷಣ ತನ್ನ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ನಲ್ಲಿ ವಿಡಿಯೊ ಹರಿಬಿಟ್ಟ. ಈ ಕಾರಣಕ್ಕೆ ಅವನ್ನು ಬಂಧಿಸಿ, ಮೊಬೈಲ್ ವಶಪಡಿಸಿಕೊಳ್ಳಲಾಯಿತು’ ಎಂದು ತಾಲ್ಲೂಕು ಚುನಾವಣಾ ಅಧಿಕಾರಿ ಅಪ್ಪಾಜಿ ತಿಳಿಸಿದ್ದಾರೆ.
ಅದೇ ರೀತಿ, ಮಲ್ಲಯ್ಯ ಹಾಗೂ ರಾಘವೇಂದ್ರ ಕೂಡ ಮತಯಂತ್ರದ ಮುಂದೆಯೇ ಫೋಟೊ ಕ್ಲಿಕ್ಕಿಸಿ, ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.