ಕಲಬುರಗಿ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಕೈಗೊಂಡ ನೇರ ಸರಣಿ ಪಾಠಗಳು ಯಶಸ್ವಿಯಾಗಿವೆ. ಇಂಥ ಶೈಕ್ಷಣಿಕ ಯೋಜನೆಗಳಿಂದ ಫಲಿತಾಂಶ ಸುಧಾರಣೆ ಮಾಡಲು ಸಾಧ್ಯವಿದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ರಮೇಶ ಜಾನಕರ್ ಹೇಳಿದರು.
ನಗರದ ಗೊಲ್ಲಾಳೇಶ್ವರ ಪಿಯು ವಿಜ್ಞಾನ ಕಾಲೇಜಿನಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಸರಣಿ ಪಾಠಗಳ ಸಮಾರೋಪ ಹಾಗೂ ಸಂಪನ್ಮೂಲ ವ್ಯಕ್ತಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳು ಪರೀಕ್ಷೆ ಬಗ್ಗೆ ಆತಂಕ ಪಡದೆ ಸರಳವಾಗಿ ಬರೆಯಬೇಕು. ಶಿಕ್ಷಕರು ಅವರಿಗೆ ಆತ್ಮವಿಶ್ವಾಸ ಮೂಡಿಸಬೇಕು. ಈ ದೃಷ್ಟಿಯಲ್ಲಿ ಈ ಎರಡೂ ಸಂಘದವರು ಮಾಡುತ್ತಿರುವ ಕೆಲಸ ಅಭಿನಂದನೀಯ’ ಎಂದು ಅವರು ಹೇಳಿದರು.
ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ದೇಶಮುಖ ಮಾತನಾಡಿ, ‘ರಾಜ್ಯದ ಕ್ಷೇತ್ರಶಿಕ್ಷಣಾಧಿಕಾರಿಗಳು ಕೂಡ ಒಂದು ಸಂಘ ಕಟ್ಟಿಕೊಂಡಿದ್ದೇವೆ. ಆತ್ಮಹತ್ಯೆ ಮಾಡಿಕೊಂಡ ರೈತರು ಹಾಗೂ ಕೊರೊನಾದಿಂದ ಮೃತಪಟ್ಟವರ ಮಕ್ಕಳನ್ನು ದತ್ತು ಪಡೆದು, ಅವರ ಪೂರ್ಣ ಶೈಕ್ಷಣಿಕ ಹೊಣೆ ಹೊತ್ತುಕೊಳ್ಳುವ ಕೆಲಸ ಸಾಗಿದೆ’ ಎಂದರು.
ಸಮಾಜ ಸೇವಕ ಬಾಲರಾಜ ಗುತ್ತೇದಾರ ಅವರು ಅಧ್ಯಕ್ಷತೆ ವಹಿಸಿದ್ದರು. ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ, ಡಯಟ್ ಉಪನ್ಯಾಸಕ ಶಿವಾನಂದ ರೆಡ್ಡಿ,ಸ್ಕೂಪ್ಸ್ ರಾಜ್ಯ ಅಧ್ಯಕ್ಷ ಗುರುಪಾದ ಕೋಗನೂರ,ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷೆ ಸೇವಂತಾ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಆಶಯ,ಶಿಕ್ಷಕಿಯರ ಸಂಘದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷೆ ಸಾರಿಕಾ ಸಂಗಾ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಸೇವಂತಾ ಚವಾಣ, ಧರ್ಮಣ್ಣ ಧನ್ನಿ, ಜಾಕೀರ್ ಹುಸೇನ್, ನಂದಿನಿ ಸನ್ಬಾಲ್, ಗಂಗಮ್ಮ ನಾಲವಾರ, ಭೀಮಾಶಂಕರ ಬಿರಾಳ ಹಾಗೂ ಎಲ್ಲ ಸಂಪನ್ಮೂಲ ಶಿಕ್ಷಕರನ್ನೂ ಸನ್ಮಾನಿಸಲಾಯಿತು.
ಎಂಜನೀಯರ್ ಮಹ್ಮದ ಇಬ್ರಾಹಿಂ, ರಾಜ್ಯ ಸರ್ಕಾರಿ ನೌಕರ ಸಂಘದ ಚಿತ್ತಾಪುರ ಘಟಕದ ಅಧ್ಯಕ್ಷ ಬಸವರಾಜ ಬಳೂಂಡಗಿ, ನಿರ್ದೇಶಕ ಎಂ.ಬಿ. ಪಾಟೀಲ, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ,ಭಾಗ್ಯಲಕ್ಷ್ಮಿ ಎನ್. ರೆಡ್ಡಿ, ಸಲಹೆಗಾರ ಬಾಬುರಾವ ಕುಲಕರ್ಣಿ, ಭೀಮಾಶಂಕರ ಬಿರಾಳ, ಜಾಕೀರ್ ಹುಸೇನ ಕುಪನೂರ, ವೆಂಕಟರೆಡ್ಡಿ ಕರೆಡ್ಡಿ, ನಾಗೇಂದ್ರರಾವ ಮುಚ್ಚಟ್ಟಿ, ಅನಿತಾ ರೆಡ್ಡಿ, ಧೇನು ರಾಠೋಡ ಬೆಳಮಗಿ, ವಿಶಾಲಾಕ್ಷಿ ಮಾಯಣ್ಣನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.