ಚಿಂಚೋಳಿ: ‘ಕೋಲಿ ಸಮಾಜ ಎಸ್ಟಿಗೆ ಸೇರಿಸಬೇಕೆಂಬ ಬೇಡಿಕೆಯ ಕಡತ ವಾಪಸ್ ಬಂದಿದೆ. ಕೇಂದ್ರ ಸರ್ಕಾರಕ್ಕೆ ಹೇಗೆ ಬೇಕೋ ಹಾಗೆಯೇ ಪ್ರಸ್ತಾವನೆ ತಯಾರಿಸಿ ಕಳುಹಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭರವಸೆ ನೀಡಿದ್ದಾರೆ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ತಾಲ್ಲೂಕಿನ ಸುಲೇಪೇಟದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಸೇವಾ ಸಮಿತಿ ಹಮ್ಮಿಕೊಂಡ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯುತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
‘ವಿಠಲ ಹೇರೂರು ಅವರ ಹೋರಾಟ ಸಮಾಜ ಬಾಂಧವರು ಮುಂದುವರೆಸಿಕೊಂಡು ಹೋಗಬೇಕು. ಕೋಲಿ ಕಬ್ಬಲಿಗ ಸಮಾಜದ ಜನರು ಅಂಬಿಗರ ಚೌಡಯ್ಯನವರಂತೆ ನಿಷ್ಠುರವಾದಿಗಳು ಹಾಗೂ ನಂಬಿದರೆ ಕೊನೆಯವರೆಗೂ ಜತೆಗಿರುವವರು. ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಅಪಾರವಾಗಿದೆ’ ಎಂದರು.
‘ಅಹಿಂಸಾ ಮರಮೋಧರ್ಮ ತತ್ವದ ಮೂಲಕ ಮನುಕುಲವನ್ನು ಬೆಳಗಿದ ಮಾತಾ ಮಾಣಿಕೇಶ್ವರಿ ಅಮ್ಮನವರ ಪ್ರಾಧಿಕಾರ ರಚನೆ ಜತೆಗೆ ವಿಧಾನ ಸೌಧದ ಆವರಣದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಪ್ರತ್ನಿಸುವುದಾಗಿ ಭರವಸೆ ನೀಡಿದರು. ಸುಲೇಪೇಟ ಹಾಗೂ ಚಿಂಚೋಳಿಯ ಅಂಬಿಗರ ಚೌಡಯ್ಯನವರ ಭವನ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
‘ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆಯ ಬೇಡಿಕೆ ಇನ್ನೂ ಈಡೇರಿಲ್ಲ ಸಚಿವರು ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.
ನಾಗಾಬಾಯಿ ಬುಳ್ಳಾ, ರಾಮಚಂದ್ರ ಗಣಾಪುರ, ಲಕ್ಷ್ಮಣ ಆವುಂಟಿ ಮೊದಲಾದವರು ಮಾತನಾಡಿದರು. ಗೌರಿಗುಡ್ಡದ ರೇವಣಸಿದ್ದ ಶರಣರು, ಟೆಂಗಿನ ಮಠದ ಸಿದ್ದಯ್ಯಸ್ವಾಮಿ ಸಾನಿಧ್ಯವಹಿಸಿದ್ದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ದತ್ತಾತ್ರೆಯರೆಡ್ಡಿ ಮುದಿರಾಜ, ಶರಣಪ್ಪ ತಳವಾರ, ರವಿರಾಜ ಕೊರವಿ, ನೀಲಕಂಠ ಜಮಾದಾರ, ಸಂತೋಷ ರಾಠೋಡ, ನರಸಮ್ಮ ಲಕ್ಷö್ಮಣ ಅವುಂಟಿ ಸೇರಿದಂತೆ ಹಲವರು ಇದ್ದರು.
ಶಿವಕುಮಾರ ಕೊತ್ತಪೇಟ ಅಧ್ಯಕ್ಷತೆವಹಿಸಿದ್ದರು. ಪ್ರಸ್ತಾವಿಕವಾಗಿ ವೈಜನಾಥ ದಾದಿ ಮಾತನಾಡಿದರು.
ನಾಮದೇವ ಪೊಲೀಸ್ ಪಾಟೀಲ ಸ್ವಾಗತಿಸಿದರು. ಪ್ರಭುಜಾಣ, ಶಿವಕುಮಾರ ಪೋಚಾಲ ನಿರೂಪಿಸಿದರು. ದಶರಥ ಮಗಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.