ಕಲಬುರ್ಗಿ: ಶಿವಶರಣರ ಹರಳಯ್ಯ (ಸಮಗಾರ) ಮಚಗಾರ ಸಮಾಜ ಜಿಲ್ಲಾ ಘಟಕದಿಂದ ನವೆಂಬರ್ 3ದು ಬೆಳಗ್ಗೆ 11ಕ್ಕೆ ಇಲ್ಲಿನ ಮಾನಕರ್ ಬಡವಾಣೆಯಲ್ಲಿರುವ ಸಮಾಜದ ಭವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹರಳಯ್ಯ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿರಾಯ ಎಸ್. ನಂದೂರಕರ್ ತಿಳಿಸಿದರು.
‘ಕೆಕೆಆರ್ಡಿಬಿ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಎನ್ಇಕೆಎಸ್ಆರ್ಟಿಸಿ ಅಧ್ಯಕ್ಷರಾದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರನ್ನು ಸಮಾಜದಿಂದ ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಮತ್ತಿಮೂಡ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜೇರಟಗಿ ಆಗಮಿಸಲಿದ್ದಾರೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸುತ್ತ ಬರಲಾಗಿದೆ. ಈ ವರ್ಷ ಕೂಡ ಈಗಾಗಲೇ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 27, ಪಿಯು ನಲ್ಲಿ 22 ಸಾಧಕರು ಇದ್ದಾರೆ. ಇವರಲ್ಲಿ ಅತಿ ಹೆಚ್ಚು ಅಂಕ ಪಡೆದ ಎರಡೂ ವಿಭಾಗದಲ್ಲಿ ಮೂವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಶಿವಶರಣ ಹರಳಯ್ಯ ಭಾವಚಿತ್ರ ನೀಡಲಾಗುವುದು’ ಎಂದರು.
‘ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ಮೇಘಾ ಶಿವಾನಂದ ಹೀರಾಪುರ (₹ 5000), ರಕ್ಷಿತಾ ಸುಧೀರ ಶಾಖಾಪುರ (₹ 3000), ಚೇತನಾ ಚನಬಸಪ್ಪ ನಿಡಗುಂದ (₹ 2000) ಹಾಗೂ ಪಿಯು ವಿಭಾಗದಲ್ಲಿ ಅಶೋಕ ಬಸವರಾಜ ಗೌಳಿ (₹ 5000), ಭಾಗ್ಯಶ್ರೀ ವೀರಭದ್ರ ಹರಳಯ್ಯ (₹ 3000) ಹಾಗೂ ಯಸೋದಾ ಕಾಶಿನಾಥ ಹೊನ್ನಕಿರಣಗಿ (₹ 2000) ಅವರಿಗೆ ಬಹುಮಾನ ಬಂದಿದ್ದು, ಉಳಿದವರೆಲ್ಲರಿಗೆ ಸ್ಮರಣಿಕೆ ನೀಡಲಾಗುವುದು’ ಎಂದರು.
ಸಂಘಟನೆಯ ಉಪಾಧ್ಯಕ್ಷ ಶಿವಶರಣಪ್ಪ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಹೆಬ್ಬಾಳ, ಸಲಹೆಗಾರ ಸಿದ್ದಣ್ಣ ಭಾವಿಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.