ಚಿಂಚೋಳಿ: ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಿದರೆ, ಅದು ಬಹುಬೇಗ ಸಮುದಾಯಕ್ಕೆ ತಲುಪಲಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸುದರ್ಶನ ಬಿರಾದಾರ ಹೇಳಿದರು.
ತಾಲ್ಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಸೋಮವಾರ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ತಿಳುವಳಿಕೆ ನೀಡಿದರೆ ಅವರು, ತಮ್ಮ ಕುಟುಂಬಸ್ಥರಿಗೆ ಹಾಗೂ ನೆರೆಹೊರೆಯವರಿಗೆ ತಿಳಿಸುತ್ತಾರೆ. ಅವರಿಂದ ಬೇಗನೆ ಸಮುದಾಯದಲ್ಲಿ ಜಾಗೃತಿ ಮೂಡುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಬೆಳೆಸಿಕೊಳ್ಳಬೇಕು. ಶೋಷಣೆ, ಅನ್ಯಾಯ ಮತ್ತು ದೌರ್ಜನ್ಯ ತಡೆಯಲು ಮುಂದಾಗಬೇಕು ಎಂದರು.
ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ವಕೀಲರ ಪಾತ್ರ ಕುರಿತು ಮಾತನಾಡಿದ ಹಿರಿಯ ವಕೀಲ ವಿಶ್ವನಾಥ ಬೆನಕಿನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿಸಹಾಯಕ ಅಭಿಯೋಜಕ ಶಾಂತಕುಮಾರ ಪಾಟೀಲ, ವಕೀಲ ಶರಣರೆಡ್ಡಿ ಪೊಂಗಾ, ಸುರೇಶ ಚವ್ಹಾಣ ಇದ್ದರು.
ವಿದ್ಯಾರ್ಥಿಗಳು ಯುವ ಸಂಸತ್ತು ನಡೆಸಿಕೊಟ್ಟರು. ರಮೇಶ ವೈರಾಗೆ ಸ್ವಾಗತಿಸಿ, ಡಾ. ಫರಹಾ ಬೇಗಂ ನಿರೂಪಿಸಿ, ಶ್ರೀಶೈಲ ಕುಲಾಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.