ಕಲಬುರಗಿ: ನಗರದಲ್ಲಿ ಮಂಗಳವಾರ ನಡೆದ ಸ್ಟಾಫ್ ಸೆಲೆಕ್ಷನ್ ಕಮಿಷನರ್ (ಎಸ್ಎಸ್ಸಿ–ಜಿಡಿ) ಕಾನ್ಸ್ಟೆಬಲ್ ಆಯ್ಕೆಯಾಗಿ ನಡೆದ ಲಿಖಿತ ಪರೀಕ್ಷೆಗೆ ಕೇವಲ ಎರಡು ನಿಮಿಷ ತಡವಾಗಿ ಹೋಗಿದ್ದಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂದು ಆರೋಪಿಸಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪರೀಕ್ಷೆಯು 9ಕ್ಕೆ ಶುರುವಾಗಿ 10.30ಕ್ಕೆ ಮುಕ್ತಾಯವಾಗಬೇಕಿತ್ತು. ಬೆಳಿಗ್ಗೆ 8.32ಕ್ಕೆ ಬಂದರೂ ಅವಕಾಶ ನೀಡಿಲ್ಲ. ಇದರಿಂದಾಗಿ ಎಸ್ಎಸ್ಸಿಯು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿಗಳಾದ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಂದಾಳ ಗ್ರಾಮದ ಆದಮ್ ನದಾಫ ಹಾಗೂ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಗ್ರಾಮದ ಪವನ್ ವಿಜಯಕುಮಾರ್, ‘ಬೆಳಿಗ್ಗೆಯೇ ಎದ್ದು ಗಂಟೆಗಟ್ಟಲೇ ಪ್ರಯಾಣ ಮಾಡಿ ಬರುವಷ್ಟರಲ್ಲಿ ಸಮಯ ಮೀರಿದೆ ಎಂದು ಅಧಿಕಾರಿಗಳು ತಿಳಿಸಿದರು. ಮಾನವೀಯತೆ ದೃಷ್ಟಿಯಿಂದ ನಮಗೆ ಅವಕಾಶ ಕೊಡಬೇಕಾಗಿತ್ತು. ಬಡತನದ ಹಿನ್ನೆಲೆಯಲ್ಲಿ ಬಂದಿರುವ ನಾವು ಕಷ್ಟಪಟ್ಟು ಅರ್ಜಿ ಸಲ್ಲಿಸಿದ್ದೆವು. ನಮ್ಮಂತಹ 100ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಪರೀಕ್ಷೆ ಅವಕಾಶ ನಿರಾಕರಿಸಲಾಗಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.