ಚಿಂಚೋಳಿ: ತಾಲ್ಲೂಕಿನ ಸುಲೇಪೇಟದ ಪ್ರತಿಷ್ಠಿತ ಖಟ್ವಾಂಗೇಶ್ವರ ವಿರಕ್ತ ಮಠದ ಗುರುಲಿಂಗ ಸ್ವಾಮೀಜಿ (46) ಸೋಮವಾರ ರಾತ್ರಿ.8.30ಕ್ಕೆ ಚಿತ್ರದುರ್ಗದಲ್ಲಿ ಲಿಂಗೈಕ್ಯರಾದರು.
ಚಳ್ಳಕೇರಿಯ ಕಲ್ಲಯ್ಯ ಈರಮ್ಮಾ ದಂಪತಿಯ ನಾಲ್ಕನೇ ಪುತ್ರ ಗುರುಲಿಂಗ ಸ್ವಾಮೀಜಿ ಚಿತ್ರದುರ್ಗ ಬೃಹನ್ಮಠದ ಶಾಖಾಮಠವಾಗಿರುವ ಖಟ್ವಾಂಗೇಶ್ವರ ಮಠಕ್ಕೆ 1991-92ರಲ್ಲಿ ನಿಯೋಜಿತರಾಗಿದ್ದರು. ಬಸವ ಪರಂಪರೆಯಂತೆ 1994ರಲ್ಲಿ ಪಟ್ಟಾಧಿಕಾರ ನಡೆಸಲಾಗಿತ್ತು.
ಗುರುಲಿಂಗ ಸ್ವಾಮೀಜಿ ಅಕ್ಟೋಬರ್ 27ರಂದು ಶ್ರೀಮಠದಿಂದ ಸ್ವಂತ ಕಾರಿನಲ್ಲಿ ತೆರಳುವಾಗ ಕಲಬುರ್ಗಿ ಬಳಿಯ ಕಪನೂರ ಹತ್ತಿರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಂದಿನಿಂದ ಕಲಬುರ್ಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಶ್ರೀಗಳು ಕೆಲ ದಿನಗಳ ಕಾಲ ಶ್ರೀಮಠದಲ್ಲಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಮತ್ತು ಚಿತ್ರದುರ್ಗಕ್ಕೆ ಕಳುಹಿಸಲಾಗಿತ್ತು.
ಶ್ರೀಗಳ ಅಂತ್ಯಕ್ರಿಯೆಯನ್ನು ಸುಲೇಪೇಟದ ಶ್ರೀಮಠದಲ್ಲಿ ನಡೆಸಲಾಗುವುದು. ಆದರೆ ಅಂತ್ಯಕ್ರಿಯೆ ನಡೆಸುವ ದಿನ ಇನ್ನೂ ತೀರ್ಮಾನಿಸಿಲ್ಲ ಎಂದು ಸುಲೇಪೇಟದ ಮುಖಂಡ ಬಸವರಾಜ ವಿ. ಸಜ್ಜನ್ ಪ್ರಜಾವಾಣಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.