ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅದೇ ಊರಿನ ಮೂವರು ಶಿಕ್ಷಕಿಯರು ಸ್ವಂತ ಹಣದಲ್ಲಿ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
ಶಾಲೆಯ ಸಹ ಶಿಕ್ಷಕಿ ಜ್ಞಾನೇಶ್ವರಿ ಮಲ್ಲಿಕಾರ್ಜುನ ಸಜ್ಜನ್ ಅವರು ಎಲ್ಕೆಜಿ-ಯುಕೆಜಿಯ 51 ಮಕ್ಕಳಿಗೆ ಸ್ವಂತ ಹಣದಲ್ಲಿ ರೆಡಿಮೇಡ್ ಸಮವಸ್ತ್ರ ನೀಡಿದರು. ಕಳೆದ ವರ್ಷ 37 ಮಕ್ಕಳಿಗೆ ಸ್ವಂತ ಹಣದಲ್ಲಿ ಸಮವಸ್ತ್ರ ವಿತರಿಸಿದ್ದರು.
ಸಹ ಶಿಕ್ಷಕಿ ಜಯಶ್ರೀ ಡಿ.ಕಟ್ಟಿಮನಿ ಅವರು, ಶಾಲೆಯಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಸಹಯವಾಗಲಿ ಎಂದು ಸ್ವಂತ ಹಣದಲ್ಲಿ 50 ಪ್ಲಾಸ್ಟಿಕ್ ಕುರ್ಚಿಗಳನ್ನು ಖರೀದಿಸಿ ಶಾಲೆಗೆ ಒಪ್ಪಿಸಿದ್ದಾರೆ.
ಸಹ ಶಿಕ್ಷಕಿ ಚಂದ್ರಕಲಾ ಪಿ.ರೆಡ್ಡಿ ಅವರು, ಸಭೆ ಸಮಾರಂಭಗಳಲ್ಲಿ ನೆಲದ ಮೇಲೆ ಹಾಸಲು 2 ಜಮಖಾನೆ, ವೇದಿಕೆಯ ಹಿಂದೆ ಕಟ್ಟುವ ಪರದೇ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಫೋಟೊಗಳನ್ನು ನೀಡಿದ್ದಾರೆ ಎಂದು ಮುಖ್ಯಶಿಕ್ಷಕ ಹೈದರಅಲಿ ಮಿರಾನ್ ತಿಳಿಸಿದ್ದಾರೆ.
ಚಿಮ್ಮನಚೋಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 292 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಚಿಮ್ಮನಚೋಡ ಗ್ರಾಮದವರೇ ಆಗಿರುವ ಶಾಲೆಯ ಸಹ ಶಿಕ್ಷಕಿಯರು ವಿವಿಧ ಕೊಡುಗೆಗಳನ್ನು ನೀಡಿರುವುದು ಇತರರಿಗೆ ಮಾದರಿ ಎಂದು ಕ್ಷೇತ್ರ ಶಿಕ್ಷಕಣಾಧಿಕಾರಿ ವಿ. ಲಕ್ಷ್ಮಯ್ಯ ಶ್ಲಾಘಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್ ಮಾತನಾಡಿದರು. ಬಿಆರ್ಪಿ ಯಶವಂತ ಪೂಜಾರಿ, ಸುನೀಲ ಕಂದಿ, ವಿಜಯಲಕ್ಷ್ಮಿ, ಜ್ಯೋತಿ, ವಿಶಾಲಾಕ್ಷಿ, ರೂಪಾ, ಗಂಗಮ್ಮ ವಿಜಯಭರತ, ಆಕಾಶ, ಜಾಫರ್ ಮೊದಲಾದವರು ಇದ್ದರು.
ವಿಶಾಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ನಿರೂಪಿಸಿದರು. ರೂಪಾ ವಂದಿಸಿದರು.
51 ಮಕ್ಕಳಿಗೆ ಸಮವಸ್ತ್ರ ವಿತರಣೆ | ಶಾಲೆಗೆ 50 ಖುರ್ಚಿಗಳ ದೇಣಿಗೆ |ಜ್ಞಾನಪೀಠ ಪ್ರಶಸ್ತಿ ಪುರಸ್ಲೃತರ ಪೋಟೊ, ವೇದಿಕೆ ಪರದೆ, 2 ಜಮಖಾನೆ ಕೊಡುಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.