ಕಲಬುರಗಿ: ಕೇಂದ್ರ ಭೂಸಾರಿಗೆ ಸಚಿವಾಲಯವು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದಿಂದ ರಾಜ್ಯದ ಕಲಬುರಗಿ, ಯಾದಗಿರಿ, ರಾಯಚೂರು ಮೂಲಕ ಆಂಧ್ರಪ್ರದೇಶದ ಕರ್ನೂಲ್ ಮಾರ್ಗವಾಗಿ ತಮಿಳುನಾಡಿನ ಚೆನ್ನೈ ಸಂಪರ್ಕಿಸುವ ಷಟ್ಪಥ (ಆರು ಲೇನ್) ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದ್ದು, ಡಿ 2ರಂದುಜಾಗತಿಕ ಟೆಂಡರ್ ಕರೆಯಲಾಗಿದೆ.
ಈ ರಸ್ತೆ ಯೋಜನೆಯಿಂದಾಗಿ ಕಲಬುರಗಿ–ರಾಯಚೂರು ಮಧ್ಯದ ಪ್ರಯಾಣದ ಅವಧಿ ಇನ್ನಷ್ಟು ಕಡಿಮೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಈ ಮಹತ್ವಾಕಾಂಕ್ಷಿ ರಸ್ತೆ ನಿರ್ಮಾಣದ ಮೇಲ್ವಿಚಾರಣೆ ವಹಿಸಲಿದೆ.
ಜಿಲ್ಲೆಯ ಅಫಜಲಪುರ, ಕಲಬುರಗಿ ಹಾಗೂ ಜೇವರ್ಗಿ ತಾಲ್ಲೂಕುಗಳಲ್ಲಿ ರಸ್ತೆಯು ಹಾದುಹೋಗಲಿದ್ದು, ಬಡದಾಳ–ಅಂದೋಲಾ ಮಧ್ಯದ 71 ಕಿ.ಮೀ. ರಸ್ತೆ ನಿರ್ಮಾಣಕ್ಕೆ ₹ 1769 ಕೋಟಿ, ಅಂದೋಲಾ–ಬಸವಂತಪುರ ಮಧ್ಯದ 65.5 ಕಿ.ಮೀ. ರಸ್ತೆಗೆ ₹ 1606 ಕೋಟಿ ವೆಚ್ಚ ಮಾಡುತ್ತಿದೆ.
ಸೊಲ್ಲಾಪುರ, ಕರ್ನೂಲ್, ಚೆನ್ನೈ ಷಟ್ಪಥ ಆರ್ಥಿಕ ಕಾರಿಡಾರ್ ರಸ್ತೆಯು ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ 177 ಕಿ.ಮೀ. ಹಾದು ಹೋಗಲಿದೆ.
ಈ ಯೋಜನೆಯಡಿ ಪ್ರತಿ ಕಿ.ಮೀ. ರಸ್ತೆಗೆ ₹ 25 ಕೋಟಿ ವೆಚ್ಚವಾಗಲಿದೆ.
ದ್ವಿಚಕ್ರ ವಾಹನಕ್ಕಿಲ್ಲ ಅವಕಾಶ
ಸರಕು ಸಾಗಣೆ ಮಾಡುವ ಭಾರಿ ವಾಹನಗಳ ಓಡಾಟವನ್ನು ಗಮನದಲ್ಲಿರಿಸಿಕೊಂಡು ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವುದರಿಂದ ಇದರಲ್ಲಿ ದ್ವಿಚಕ್ರ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ವಾಹನಗಳ ವೇಗವೂ ಹೆಚ್ಚಾಗಿರುವುದರಿಂದ ದ್ವಿಚಕ್ರಗಳ ಓಡಾಟಕ್ಕೆ ಅವಕಾಶ ನೀಡಿದರೆ ಅಪಘಾತ, ಜೀವಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ದೆಹಲಿ–ಮೀರತ್ ಮಧ್ಯದ ಷಟ್ಪಥ ಕಾರಿಡಾರ್ನಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.