ಪೊಲೀಸ್
– ಐಸ್ಟಾಕ್ ಚಿತ್ರ
ಕಲಬುರಗಿ: ಆಳಂದ ತಾಲ್ಲೂಕಿನ ಕೊಡಲಹಂಗರಗಾ ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರಿಗೆ ಜೀವ ಬೆದರಿಕೆ ಹಾಕಿ ಅಪಹರಿಸಿದ ಆರೋಪದಡಿ ಇಬ್ಬರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂ. ಸದಸ್ಯರಾದ ರಾಜಶೇಖರ ಕಾಂದೆ ಮತ್ತು ಅನಂತ ರೆಡ್ಡಿ ಅಪಹರಣ ಆದವರು. ಅಪಹರಿಸಿದ ಆರೋಪದಡಿ ವಿಜಯ ಹಳ್ಳಿ, ರಾಜಕುಮಾರ ನಡಗೇರಿ ಸೇರಿ ಸುಮಾರು 40 ಜನರಿದ್ದ ಗುಂಪಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಲು ನಿರ್ಣಯಿಸಿದ್ದರು. ಸದಸ್ಯರಾದ ರಾಜಶೇಖರ, ಅನಂತ ರೆಡ್ಡಿ, ಸುಭದ್ರಾ ಮಲ್ಲಪ್ಪ, ಶೋಭಾ ರವೀಂದ್ರ, ವೈಜನಾಥ ಶ್ರೀಮಂತ, ಇಂದುಬಾಯಿ ರಾಣಪ್ಪ, ಅಂಬವ್ವ ಭೀಮಶ್ಯಾ ಹಾಗೂ ಮಲ್ಲಪ್ಪ ಬಸಪ್ಪ ಅವರು ಜತೆಗೂಡಿ ಶಹಾಬಾದ್ ಸಮೀಪದ ತರಿ ತಾಂಡಾಕ್ಕೆ ತೆರಳಿದ್ದರು ಎಂದರು.
ತಾಂಡಾದ ಅನಿಲ್ ರಾಠೋಡ ಮನೆಯಲ್ಲಿ ಇದ್ದಾಗ ವಿಜಯ ಹಳ್ಳಿ, ರಾಜಕುಮಾರ ಸೇರಿ ಸುಮಾರು 40 ಜನರ ಗುಂಪಿನೊಂದಿಗೆ ಬಂದರು. ಹಲ್ಲೆ ಮಾಡಿ, ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಇಬ್ಬರನ್ನು ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊಡಲಹಂಗರಗಾ ಗ್ರಾ.ಪಂ.ನಲ್ಲಿ 12 ಜನರ ಸದಸ್ಯರ ಬಲವಿದೆ. ಅಪಹರಣವಾದ ಇಬ್ಬರು ಸದಸ್ಯರು ಇನ್ನೂ ಪತ್ತೆಯಾಗದ ಕಾರಣ ಗುರುವಾರ ನಡೆಯಬೇಕಿದ್ದ ಅವಿಶ್ವಾಸ ಮಂಡನೆಯೂ ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.