ಚಿತ್ತಾಪುರ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮಂಜಿನ ವಾತಾವರಣ ಇದೆ. ಶನಿವಾರ ಸೂರ್ಯೋದಯದ ಸಮಯದಲ್ಲಿ ದಟ್ಟವಾದ ಮಂಜು ಕವಿದು ರೈತ ಸಮುದಾಯ ಆತಂಕ ಪಡುವಂತೆ ಮಾಡಿದೆ.
ದಟ್ಟವಾಗಿ ಮಂಜು ಹೂವಾಡುತ್ತಿರುವ ತೊಗರಿ ಬೆಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ತೊಗರಿ ಮೊಗ್ಗಿನ ಕೊನೆಯ ಭಾಗ ಸುಟ್ಟಂತ್ತಾಗಿದೆ. ಹೂವು ಮತ್ತು ಚೆಟ್ಟಿ ಉದುರಿ ಬೆಳೆ ಹಾನಿ ಆಗುತ್ತಿದೆ. ಹುಲುಸಾಗಿ ಬೆಳೆದ ತೊಗರಿ ಬೆಳೆ ಕಂಡು ಬಂಪರ್ ಇಳುವರಿಯ ನಿರೀಕ್ಷೆ ಕಾಣುತ್ತಿದ್ದ ರೈತರಿಗೆ ಈಗ ಇಳುವರಿ ಕುಸಿಯುವ ಆತಂಕ ಶುರುವಾಗಿದೆ.
ತೊಗರಿ ಬೆಳೆ ಸಂರಕ್ಷಣೆಗೆ ರೈತರು ದುಬಾರಿ ಖರ್ಚು ಮಾಡಬೇಕಾಗಿದೆ. ಮಂಜಿನಿಂದಾಗಿ ಹೂವು ಉದುರಿ ಇಳುವರಿ ತುಂಬ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಭಾಗೋಡಿ ಗ್ರಾಮದ ರೈತ ದೇವಿಂದ್ರ ಅವರು ಶನಿವಾರ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.
‘ನಸುಕಿನಲ್ಲಿ ಶುರುವಾಗುವ ಮಂಜಿನ ವಾತಾವರಣವು ಬೆಳಿಗ್ಗೆ 9 ಗಂಟೆಯವರೆಗೆ ಮುಂದುವರಿಯುತ್ತಿದೆ. 200 ಮೀಟರ್ ದೂರದಲ್ಲಿರುವ ಗಿಡಮರಗಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳು ಗೋಚರಿಸುತ್ತಿಲ್ಲ. ಲೈಟ್ ಹಾಕಿಕೊಂಡು ವಾಹನಗಳು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದಂಡೋತಿ ಗ್ರಾಮದ ಸಾಬಣ್ಣ ಭರಾಟೆ ಹೇಳಿದರು.
‘ಚಳಿಗಾಲ ಇರುವುದರಿಂದ ಮಂಜು ಕವಿಯುವುದು ಸಾಮಾನ್ಯ. ಮಂಜಿನಿಂದಾಗಿ ತೊಗರಿ ಬೆಳೆಯ ಹೂವು ಉದುರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹೂವು ಉದುರುವುದನ್ನು ತಡೆಯಲು ಕೃಷಿ ಇಲಾಖೆಯಲ್ಲಿ ಔಷಧವಿದೆ. ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಬೆಳೆ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಕೃಷಿ ಇಲಾಖೆಯ ಸೇಡಂ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಬಾಲರಾಜ ರಂಗರಾವ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.