ADVERTISEMENT

ಚಂದ್ರಂಪಳ್ಳಿಗೆ ಪ್ರವಾಸಿಗರ ಲಗ್ಗೆ

ಜಗನ್ನಾಥ ಡಿ.ಶೇರಿಕಾರ
Published 5 ಜುಲೈ 2020, 8:55 IST
Last Updated 5 ಜುಲೈ 2020, 8:55 IST
ಪರಿಸರ ಪ್ರವಾಸಿ ತಾಣವಾಗಿರುವ ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯದ ಬಂಡ್ ಮೇಲೆ ಪ್ರವಾಸಿಗರು ಖುಷಿಯಿಂದ ಹೆಜ್ಜೆ ಹಾಕುತ್ತ ಪ್ರಕೃತಿಯ ಸಿರಿ ಆಸ್ವಾದಿಸಿದರು
ಪರಿಸರ ಪ್ರವಾಸಿ ತಾಣವಾಗಿರುವ ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯದ ಬಂಡ್ ಮೇಲೆ ಪ್ರವಾಸಿಗರು ಖುಷಿಯಿಂದ ಹೆಜ್ಜೆ ಹಾಕುತ್ತ ಪ್ರಕೃತಿಯ ಸಿರಿ ಆಸ್ವಾದಿಸಿದರು   

ಚಿಂಚೋಳಿ: ಮಳೆಯಿಂದಾಗಿ ಚಂದ್ರಂಪಳ್ಳಿ ಜಲಾಶಯದ ಸುತ್ತಮುತ್ತ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ. ಶನಿವಾರ ನೂರಾರು ಪ್ರವಾಸಿಗರು ಬಂದಿದ್ದರು.

ಮಳೆಯಿಂದ ಒಂದೇ ದಿನ ಹತ್ತಾರು ಅಡಿ ನೀರು ಹರಿದು ಬಂದಿದ್ದರಿಂದ ಜಲಾಶಯದ ನೀರು ಬಂಗಾರದ ಬಣ್ಣದೊಂದಿಗೆ ಹೊಳೆಯುತ್ತಿದೆ. ಸುತ್ತಲೂ ಹಸಿರು ಕಾಡು, ತೊಟಗಾರಿಕಾ ಕ್ಷೇತ್ರದಲ್ಲಿ ಗಿಡ ಮರಗಳ ಪೊದೆಯಲ್ಲಿ ನವಿಲುಗಳು ಕೂಗುತ್ತ ನರ್ತಿಸುತ್ತಿದ್ದವು.

ತಂಪಾದ ಗಾಳಿ, ಪಕ್ಷಿಗಳ ಕಲರವ ಜನರ ಓಡಾಟದಿಂದ ಪ್ರವಾಸಿ ತಾಣಕ್ಕೆ ಮೆರಗು ಬಂದಿತ್ತು. ಬಂಡ್‌ನಿಂದ ಉತ್ತರ ದಿಕ್ಕಿಗೆ ಕಣ್ಣು ಹಾಯಿಸಿದರೆ ಹಚ್ಚ ಹಸಿರು ಗುಡ್ಡದ ಮೇಲೆ ಗೊಟ್ಟಮಗೊಟ್ಟದ ಬಕ್ಕಪ್ರಭುಗಳ ದೇವಾಲಯ ಕಣ್ಮನ ಸೆಳೆಯುತ್ತಿದೆ.

ADVERTISEMENT

ಜಲಾಶಯದ ಬಂಡ್ ಮೇಲೆ, ಗೇಟ್ ಹಾಗೂ ದಂಡೆ ಮತ್ತು ವನ್ಯಜೀವಿ ಧಾಮದ ಕಾಟೇಜ್ ಬಳಿ ವಿಹರಿಸಿ ಅಲ್ಲಿಂದ್ ಗೇಟ್‌ವರೆಗೆ ಹಾಗೂ ಮೇಲ್ಭಾಗದ ರೈತ ತರಬೇತಿ ಭವನದ ಬೆಟ್ಟ ಹಾಗೂ ಹನುಮಾನ ಮಂದಿರದ ಬಳಿ ವಿರಮಿಸಿ ಮನೆಗಳಿಗೆ ಮರಳಿದರು.

‘ಲಾಕಡೌನ್‌ನಿಂದಾಗಿ ಕುಟುಂಬ ಸಮೇತ ಮನೆಗಳಿಮದ ಹೊರಗೆ ಬಂದಿರಲಿಲ್ಲ. ಇದರಿಂದ ಶನಿವಾರ ನಾನು ಹಾಗೂ ನನ್ನ ಅಣ್ಣ ಪರಿವಾರದೊಂದಿಗೆ ಬಂದಿದ್ದೇವೆ’ ಎಂದು ಚಿಂಚೋಳಿಯ ಸುರೇಶ ಹುಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಐನೋಳ್ಳಿಯಿಂದ ಚಂದ್ರಂಪಳ್ಳಿಗೆ ಬರುವ ರಸ್ತೆ ಹಾಳಾಗಿದ್ದು, ಕೊಳ್ಳೂರು ಕ್ರಾಸ್‌ನಿಂದ ಇಲ್ಲಿಗೆ ಬರಲು ಉತ್ತಮ ರಸ್ತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.