ಕಲಬುರ್ಗಿ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಹೋರಾಟ ಗುರುವಾರ 9ನೇ ದಿನದಲ್ಲಿ ಮುಂದುವರಿಯಿತು. ಎಂದಿನಂತೆ ಇಂದು ಕೂಡ ಜನರು ಬಸ್ಗಳಿಗಾಗಿ ಪರದಾಡಿದರು. ಉಳಿದಂತೆ, ಖಾಸಗಿ ವಾಹನಗಳನ್ನೇ ಆಶ್ರಯಿಸಿ ಸಂಚರಿಸಿದರು.
ಇದರ ಮಧ್ಯೆಯೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಉಪಚುನಾವಣೆ ನಡೆಯುವ ಊರುಗಳಿಗೆ ಬಸ್ಗಳನ್ನು ಒದಗಿಸಲಾಗಿದೆ. ಬೆಳಗಾವಿ, ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಕ್ಕಾಗಿ ಒಟ್ಟಿ 310 ಬಸ್ಗಳನ್ನು ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ಘಟಕದ ವ್ಯಾಪ್ತಿಯ ಹಟ್ಟಿಯಲ್ಲಿ ಚಲಿಸುತ್ತಿದ್ದ ಬಸ್ ತಡೆದು ಚಾಲಕ ಹಾಗೂ ನಿರ್ವಾಹಕರಿಗೆ ಅವಮಾನ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಐವರು ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದೆಡೆ, ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪುರ ಕ್ರಾಸ್ ಹತ್ತಿರ ಕರ್ನೂಲ್ ಕಡೆಗೆ ಹೊರಟಿದ್ದ ಕರ್ತವ್ಯ ನಿರತ ಚಾಲಕ ಹಾಗೂ ನಿರ್ವಾಹಕರಿಗೆ ಗುಂಪೊಂದು ಕುಂಕುಮ ಎರಚಿ ಅಸಭ್ಯವಾಗಿ ವರ್ತಿಸಿದೆ. ಅಪರಿಚಿತ 6 ಮಂದಿ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.