ADVERTISEMENT

ತಮ್ಮನನ್ನು ಬಾವಿಗೆ ತಳ್ಳಿ, ಅಣ್ಣನೂ ಬಾವಿಗೆ ಹಾರಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 15:13 IST
Last Updated 4 ಜನವರಿ 2021, 15:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಳಂದ: ಮಾನಸಿಕ ಅಸ್ವಸ್ಥ ಅಣ್ಣ ತಮ್ಮನನ್ನು ಬಾವಿಗೆ ತಳ್ಳಿ, ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಭೂಸನೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಭೂಸನೂರು ಗ್ರಾಮದ ಸುನೀಲ ತುಳಸಿರಾಮ ಮರಾಠ (17) ಹಾಗೂ ಶೇಖರ ತುಳಸಿರಾಮ (12) ಮೃತಪಟ್ಟವರು. ಸಂಜೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಅಣ್ಣನು ತಮ್ಮನಿಗೆ ಬಹಿರ್ದೆಸೆಗೆ ಕರೆದುಕೊಂಡು ಹೋಗಿದ್ದಾನೆ. ಮಾನಸಿಕ ಅಸ್ವಸ್ಥನಾದ ಅಣ್ಣನು ತಮ್ಮನನ್ನುಬಾವಿಗೆ ತಳ್ಳಿ, ತಾನೂ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾತ್ರಿಯಾದರೂ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ತಂದೆ, ತಾಯಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದರು. ಸಂಶಯದಿಂದ ಸಮೀಪದ ಹೊಲಕ್ಕೆ ಹೋದಾಗ ಅಲ್ಲಿನ ಬಾವಿಯಲ್ಲಿ ಬೆಳಿಗ್ಗೆ ತಮ್ಮನ ಶವ ಪತ್ತೆಯಾಗಿದೆ.

ADVERTISEMENT

ನಿಂಬರ್ಗಾ ಪಿಎಸ್ಐ ಸುವರ್ಣಾ ಮಲಶೆಟ್ಟಿ ನೇತೃತ್ವದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಮಧ್ಯಾಹ್ನ ಅಣ್ಣನ ಶವ ಪತ್ತೆ ಮಾಡಿದರು. ಮೃತ ಸುನೀಲ ಕೂಲಿ ಕೆಲಸ ಮಾಡುತ್ತಿದ್ದರೆ, ಶೇಖರ 6ನೇ ತರಗತಿಯಲ್ಲಿ ಓದುತ್ತಿದ್ದನು. ಮೃತ ಸಹೋದರರಿಗೆ ತಂದೆ, ತಾಯಿ ಹಾಗೂ ಹಿರಿಯ ಸಹೋದರ ಮತ್ತು ಸಹೋದರಿ ಇದ್ದಾರೆ.

ನಿಂಬರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.