ADVERTISEMENT

ಕಲಬುರಗಿ | ಸುಸ್ಥಿರ ನಗರಕ್ಕೆ ಯೋಜನಾ ತತ್ವ ಅಗತ್ಯ: ಶೈಲೇಂದರ್ ಸಿಂಗ್

ಪಿಡಿಎ ಕಾಲೇಜಿನಲ್ಲಿ ಮಾನ್ಸೂನ್ ಸ್ಟುಡಿಯೊ-2025 ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 6:00 IST
Last Updated 22 ಆಗಸ್ಟ್ 2025, 6:00 IST
ಕಲಬುರಗಿಯ ಪಿಡಿಎ ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು. ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್,  ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಕೆಕೆಆರ್‌ಟಿಸಿ ಚೀಫ್ ಸಿಸ್ಟಮ್ ಮ್ಯಾನೇಜರ್ ಸಂತೋಷ ಗೊಗೇರಿ, ಶೈಲೇಂದರ್ ಸಿಂಗ್ ಇದ್ದರು
ಕಲಬುರಗಿಯ ಪಿಡಿಎ ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು. ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್,  ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಕೆಕೆಆರ್‌ಟಿಸಿ ಚೀಫ್ ಸಿಸ್ಟಮ್ ಮ್ಯಾನೇಜರ್ ಸಂತೋಷ ಗೊಗೇರಿ, ಶೈಲೇಂದರ್ ಸಿಂಗ್ ಇದ್ದರು   

ಕಲಬುರಗಿ: ‘ನಗರದ ಭವಿಷ್ಯ ರೂಪಿಸುವಲ್ಲಿ ಯೋಜನಾ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಯೋಜಿತವಲ್ಲದ ಬೆಳವಣಿಗೆಯು ನಗರ ವಿಘಟನೆಗೆ ಕಾರಣವಾಗುತ್ತದೆ. ಹೀಗಾಗಿ ಕಲಬುರಗಿ ನಗರ ಸುಸ್ಥಿರ ಅಭಿವೃದ್ಧಿಗೆ ಯೋಜನಾ ತತ್ವ ಅಳವಡಿಸಿಕೊಳ್ಳುವುದು ಅತ್ಯಗತ್ಯ’ ಎಂದು ನಗರ ಯೋಜನಾ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಶೈಲೇಂದರ್ ಸಿಂಗ್ ಹೇಳಿದರು.

ನಗರ ಭೂ ಸಾರಿಗೆ ನಿರ್ದೇಶನಾಲಯ, ಕೆಕೆಆರ್‌ಡಿಬಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ ನಗರ ಮೊಬಿಲಿಟಿ ಯೋಜನೆ, ವಿನ್ಯಾಸ ಹಾಗೂ ಕ್ರಿಯಾ ಸಂಶೋಧನಾ ಕೇಂದ್ರ ಹಾಗೂ ಪಿಡಿಎಸ್‌ಎಸ್‌ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾಗದ ಸಹಯೋಗದೊಂದಿಗೆ ಇತ್ತೀಚೆಗೆ ಪಿಡಿಎ ಕಾಲೇಜಿನಲ್ಲಿ ಮೂರು ದಿನಗಳ ಕಾಲ ವಿದ್ಯಾರ್ಥಿಗಳು, ಯುವ ವೃತ್ತಿಪರರು, ನಗರ ಯೋಜಕರು ಮತ್ತು ವಿನ್ಯಾಸಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸುಸ್ಥಿರ ನಗರ ಪರಿಸರ ನಿರ್ಮಿಸಲು ಹೊಸ ದೃಷ್ಟಿಕೋನಗಳು, ಆಲೋಚನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಇದರಲ್ಲಿ ಪಾಲ್ಗೊಳ್ಳಬೇಕು. ನಗರ ಮೊಬಿಲಿಟಿ ಮತ್ತು ಅಭಿವೃದ್ಧಿಯಲ್ಲಿ ಸುಸ್ಥಿರ ಪರಿಹಾರಗಳೊಂದಿಗೆ ಕಲಬುರಗಿಯ ಭವಿಷ್ಯವನ್ನು ರೂಪಿಸಲು ಯುವ ಮನಸ್ಸುಗಳಿಗೆ ಮಾನ್ಸೂನ್ ಸ್ಟುಡಿಯೊ ಒಂದು ವೇದಿಕೆಯಾಗಿದೆ’ ಎಂದರು.

ADVERTISEMENT

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ ಮಾತನಾಡಿದರು. ಕೆಎಲ್‌ಇ ತಾಂತ್ರಿಕ ವಿವಿಯ ಪ್ರಾಧ್ಯಾಪಕಿ ಆರ್. ಗೀತಾಂಜಲಿ ರಾವ್ ಅವರು ನಗರ ಯೋಜನೆ ಮತ್ತು ನಗರ ವಿನ್ಯಾಸದ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.

2ನೇ ದಿನ ಕೆಎಲ್‌ಇ ತಾಂತ್ರಿಕ ವಿವಿಯ ಪ್ರೊ.ಕಲ್ಪೇಶಕುಮಾರ್ ಪಟೇಲ್ ಉಪನ್ಯಾಸ ನೀಡಿದರು. ಕುಡಾ ಆಯುಕ್ತ ಗಂಗಾಧರ ಮಳಗಿ, ಕೆಕೆಆರ್‌ಡಿಬಿ ಹೆಚ್ಚುವರಿ ನಿರ್ದೇಶಕಿ ಪ್ರವೀಣ ಪ್ರಿಯಾ ಡೇವಿಡ್, ನಗರ ಭೂ ಸಾರಿಗೆ ನಿರ್ದೇಶನಾಲಯದ ವಿಶೇಷಾಧಿಕಾರಿ ಮೋನಿಕಾ ಕಶ್ಕರಿ, ಎಚ್‌ಕೆಇಎಸ್‌ ಆಡಳಿತ ಮಂಡಳಿ ಸದಸ್ಯ ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಶಿವಕುಮಾರ ಪಾಟೀಲ ಸೇರಿದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಪಿ.ಡಿ.ಎಸ್.ಎಸ್. ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ತಂಡಕ್ಕೆ ಸನ್ಮಾನ

ಮೂರು ದಿನಗಳ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮೂರು ತಂಡಗಳಿಗೆ ನಗರ ವಿನ್ಯಾಸಕ್ಕೆ ಸಂಬಂಧಪಟ್ಟಂತೆ ನೀಡಲಾದ ಟಾಸ್ಕ್‌ನಲ್ಲಿ ವಿಜೇತ ತಂಡಕ್ಕೆ ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಸನ್ಮಾನಿಸಿದರು. ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ ಕೆಕೆಆರ್‌ಟಿಸಿ ಚೀಫ್ ಸಿಸ್ಟಮ್ ಮ್ಯಾನೇಜರ್ ಸಂತೋಷ ಗೊಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.