ಕಲಬುರ್ಗಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮವನ್ನು ರಚಿಸಿದ ಹಿನ್ನೆಲೆಯಲ್ಲಿ, ನಗರದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ವೀರಶೈವ ಸಮಾಜ ಹಾಗೂ ಇತರ ಸಂಘಟನೆಗಳ ಸದಸ್ಯರು ವಿಜಯೋತ್ಸವ ಆಚರಿಸಿದರು. ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಜೈಕಾರ ಕೂಗಿದರು.
ಇಲ್ಲಿನ ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಮಹಾಸಭಾ ಯುವ ಘಟಕ ವತಿಯಿಂದ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಅರುಣಕುಮಾರ ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಹಾಲೆರೆದ ಮುಖಂಡರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
‘ರಾಜ್ಯದಲ್ಲಿ ಬಹುದೊಡ್ಡದು ಎಂಬ ಹೆಗ್ಗಳಿಕೆ ಪಡೆದ ಲಿಂಗಾಯತ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ರಚನೆ ಮಾಡುವ ಮೂಲಕ ದಶಕಗಳ ಬೇಡಿಕೆಗೆ ಈಡೇರಿದೆ. ಮುಂದಿನ ದಿನಗಳಲ್ಲಿ ಲಿಂಗಾಯತರ ಸಮಗ್ರ ಅಭಿವೃದ್ಧಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು’ ಎಂದು ಅರುಣಕುಮಾರ ಪಾಟೀಲ ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಜೆ.ಕೆ.ಪಾಟೀಲ ಹರಸೂರ ರಾಜುಗೌಡ ನಾಗನಹಳ್ಳಿ, ಕಲ್ಯಾಣಪ್ಪ ಪಾಟೀಲ ಮಳಖೇಡ, ತಾತಗೌಡ ಪಾಟೀಲ, ಡಾ.ರಾಜಶೇಖರ ಬಂಡೆ, ಮಾಲಾ ಕಣ್ಣಿ, ಮಾಲಾ ಧನ್ನೂರ, ಉದಯ ಪಾಟೀಲ, ಮಹೇಶ್ವರಿ ವಾಲಿ, ಮಹೇಶ ಪಾಟೀಲ, ವಿ.ಸಿ.ಪಾಟೀಲ, ಶಿವಲಿಂಗಪ್ಪ ಬಿರಾದಾರ ಇದ್ದರು.
ಇನ್ನೊಂದೆಡೆ, ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಮುಂಭಾಗದಲ್ಲಿ ಅಖಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಮುಖಂಡರೂ ಹರ್ಷ ವ್ಯಕ್ತಪಡಿಸಿದರು. ಮಹಾಸಭೆ ಜಿಲ್ಲಾ ಘಟಕ ಅಧ್ಯಕ್ಷ ಶರಣಕುಮಾರ ಮೋದಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ ಚಂದ್ರಕಾಂತ ಪಾಟೀಲ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಜಗದೀಶ ಆರ್.ಕೆ, ಶರಣು ಭೂಸನೂರ, ಅಶೋಕ ಪಟ್ಟಣಶೆಟ್ಟಿ, ಮಹೇಂದ್ರ ಮೂಲಗೆ, ಪ್ರವೀಣ ತೆಗನೂರ, ಚನ್ನು ದೇಗಾಂವ, ಭೀಮಾಶಂಕರ, ಶರಣು ಟೆಂಗಳಿ, ಈರಣ್ಣ ಝಳಕಿ, ಶಿವರಾಜ ಆರ್.ಕೆ.ಮಚ್ಚೇಂದ್ರನಾಥ ಮೂಲಗೆ, ಬಸವರಾಜ ಪಾಟೀಲ, ರಮೇಶ ಕಡಾಳೆ, ಕಲ್ಯಾಣಪ್ಪ ವಾಗ್ಧರಿ, ದತ್ತು ಪಾಟೀಲ, ಶೀಲಾ ಮುತ್ತಿನ, ಗೌರಿ ಚಿಚಕೋಟಿ, ಶಾಂತು ದುಧನಿ, ಸಂಗಮೇಶ ರಾಜೋಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.