ಮತದಾನ
– ಪ್ರಜಾವಾಣಿ ಚಿತ್ರ
ಕಲಬುರಗಿ: ಆಳಂದ ಕ್ಷೇತ್ರದ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎಸ್ಐಟಿ ಅಧಿಕಾರಿಗಳು ನಗರದಲ್ಲಿ ಗುರುವಾರವೂ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಪ್ರಕರಣ ಸಂಬಂಧ ಐವರನ್ನು ಎಸ್ಐಟಿ ಇತ್ತೀಚೆಗೆ ವಶಕ್ಕೆ ಪಡೆದಿತ್ತು. ಬಳಿಕ ಸರ್ಚ್ ವಾರೆಂಟ್ ಪಡೆದು ಇದೀಗ ಅವರ ಮನೆಗಳಲ್ಲಿ ಶೋಧ ನಡೆಸಲು ಅಧಿಕಾರಿಗಳು ಕಲಬುರಗಿಗೆ ಬಂದಿದ್ದರು. ಬುಧವಾರ ನಾಲ್ಕು ಕಡೆ ದಾಳಿ ನಡೆಸಿದ್ದರು.
ಗುರುವಾರ ನಗರದ ಹಾಗರಗಾ ಕ್ರಾಸ್ ಸಮೀಪದ ಜುಬೇರ್ ಕಾಲೊನಿ ಅಕ್ರಂ ಎಂಬುವರ ಬಾಡಿಗೆ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ಸಿಐಡಿ ಎಸ್ಪಿ ಶುಭನ್ವಿತಾ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ತನಕ ಶೋಧ ನಡೆಸಿತು.
‘ಅಕ್ರಂ ಅವರ ಮನೆಯಲ್ಲಿ ಮತದಾರರ ಗುರುತಿನ ಚೀಟಿ ಮುದ್ರಿಸಲು ಬಳಸುವ ಕಾಗದ, ಮಸಿ, ಮತದಾರರ ಪಟ್ಟಿ ಸಿಕ್ಕಿದೆ’ ಎಂದು ಮೂಲಗಳು ಹೇಳಿವೆ.
‘ಬುಧವಾರ ನಡೆಸಿದ್ದ ದಾಳಿ ಪೈಕಿ ರಾಮನಗರ ಬಡಾವಣೆಯ ಅಸ್ಲಂ ಎಂಬುವರ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಗುರುತಿನ ಚೀಟಿಗಳು, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಪತ್ತೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.