ವಾಡಿ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಈ ನಡುವೆ ಇಳುವರಿ ಕುಸಿತವಾಗಿದ್ದು ರೈತರಿಗೆ ಬರೆ ಎಳೆದಂತಾಗಿದೆ.
ಒಂದೆಡೆ ಮಳೆಹೊಡೆತ ಮತ್ತೊಂದೆಡೆ ಇಳುವರಿ ನಷ್ಟ ರೈತರನ್ನು ಕಂಗಲಾಗಿಸಿದೆ. ಮಳೆಯ ನಡುವೆ ಹೆಸರು ಕೊಯ್ಲು ನಡೆಸಿದ ರೈತರಿಗೆ ನಿರಾಶೆ ಉಂಟಾಗುತ್ತಿದೆ. ಎಕರೆಗೆ 4 ರಿಂದ 5 ಕ್ವಿಂಟಲ್ವರೆಗೂ ಹೆಸರು ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಪ್ರತಿ ಎಕರೆ 50 ರಿಂದ 60 ಕೆಜಿ ಅಥವಾ 1 ಕ್ವಿಂಟಲ್ವರೆಗೆ ಮಾತ್ರ ಇಳುವರಿ ಬರುತ್ತಿದೆ. ಬಿತ್ತನೆಗೆ ಹಾಕಿದ ದುಡ್ಡು ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಚಿಂತೆಗೆ ಕಾರಣವಾಗಿದೆ.
ಇದರ ಜೊತೆಗೆ ಮುಂಗಡವಾಗಿ ಬಿತ್ತಿದ್ದ ಹೆಸರು ಕಟಾವಿಗೆ ಬಂದಿದ್ದು ಕೊಯ್ಲು ಮಾಡಲು ಮಳೆ ತೀವ್ರ ಅಡ್ಡಿಯಾಗಿದೆ. ಕೆಲವೆಡೆ ಹೊಲದಲ್ಲೇ ಹೆಸರು ಕಾಯಿಗಳಿಗೆ ಮೊಳಕೆ ಬರುತ್ತಿವೆ. ಪ್ರತಿದಿನ ಮಳೆ ಸುರಿಯುತ್ತಿದ್ದು ಕೆಸರು ತುಂಬಿಕೊಂಡಿರುವ ಹೊಲಕ್ಕೆ ತೆರಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.
ನಾಲವಾರ, ಅಲಹಳ್ಳಿ, ಯಾಗಾಪುರ, ರಾವೂರು, ಇಂಗಳಗಿ, ಕಡಬೂರ, ಬಳವಡಗಿ, ಲಾಡ್ಲಾಪುರ, ಹಲಕರ್ಟಿ, ಕೊಲ್ಲೂರು ಸಹಿತ ಹಲವೆಡೆ ಬಿತ್ತನೆ ಮಾಡಿರುವ ಹೆಸರಿನ ಫಸಲು ರಾಶಿ ಮಾಡಲು ಮಳೆ ಬಿಡುತ್ತಿಲ್ಲ. ಶೇ 30ರಷ್ಟು ಮಾತ್ರ ರಾಶಿಯಾಗಿದ್ದು ಮಳೆಯಿಂದ ಒದ್ದೆಯಾದ ಹೆಸರುಕಾಳು ಒಣಗಿಸುವ ಕಾರ್ಯ ನಡೆಯುತ್ತಿದೆ. ಆದರೆ ಮಳೆ ಮತ್ತು ಬಿಸಿಲಿನ ಕೊರತೆಯಿಂದ ಅದಕ್ಕೂ ಸಮಸ್ಯೆ ಉಂಟಾಗಿದೆ.
ಮಳೆ ನಿಂತರೆ ಅಳಿದುಳಿದ ಹೆಸರು ಕೊಯ್ಲು ಕಾರ್ಯಕ್ಕೆ ವೇಗ ಸಿಗಲಿದೆ. ಮಳೆ ಬಿಡುವು ಕೊಟ್ಟರೆ ಸಾಕು ಹೆಸರು ಕಟಾವು ಮಾಡಲಾಗುತ್ತದೆ ಎನ್ನುತ್ತಾರೆ ರೈತರಾದ ಸಾಬಣ್ಣ ಗಂಜಿ, ಮರೆಪ್ಪಾ ಅಚ್ಚೋಲಿ, ಹಣಮಂತ ಕ್ಯಾದಿಗೇರ. ಮಂಜು ಹಲಕರ್ಟಿ.
ಕೇಂದ್ರ ಆರಂಭಿಸಲು ಒತ್ತಾಯ:
ಮಳೆ ನಿಂತ ಬಳಿಕ ಹೆಸರು ಕೊಯ್ಲು ಕಾರ್ಯಕ್ಕೆ ವೇಗ ಸಿಗಲಿದ್ದು ತಕ್ಷಣ ಖರೀದಿ ಕೇಂದ್ರ ಆರಂಭಿಸಬೇಕು. ಸರ್ಕಾರ ಉತ್ತಮ ಧಾರಣೆಗೆ ಹೆಸರು ಖರೀದಿಸಿ ನಷ್ಟ ಭರ್ತಿ ಮಾಡುವ ಮೂಲಕ ರೈತರ ನೆರವಿಗೆ ಮುಂದಾಗಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆಯ ಸ್ಥಳೀಯ ಮುಖಂಡ ಭೀಮು ಮಾಟ್ನಳ್ಳಿ ಒತ್ತಾಯಿಸಿದ್ದಾರೆ.
9 ಎಕರೆಯಲ್ಲಿ ಬಿತ್ತಿದ್ದ ಹೆಸರು ಮಳೆಯ ನಡುವೆ ರಾಶಿ ಮಾಡಿದ್ದು ಕೇವಲ 5 ರಿಂದ 6 ಕ್ವಿಂಟಲ್ ಆಗುತ್ತಿದೆ. ಬಿತ್ತನೆಗಾಗಿ ಹಾಕಿದ ಹಣ ವಾಪಸ್ ಬರುತ್ತಿಲ್ಲ.–ಭೀಮಣ್ಣ ಮುಷ್ಟಿಗೇರ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.