
ಅಫಜಲಪುರ: ಡಿ.23ರಂದು ಪಟ್ಟಣದ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮೊದಲ ಬಾರಿಗೆ ವಿಶ್ವ ರೈತ ದಿನಾಚಣೆಯ ಜತೆಗೆ ರೈತರ ಹಬ್ಬ ಆಚರಿಸಲು ಸ್ವಾಭಿಮಾನಿ ಕಬ್ಬು ಬೆಳೆಗಾರರ ಆಯ್ಕೆ ಹೋರಾಟ ಸಮಿತಿ ಮತ್ತು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಭರದಿಂದ ಸಿದ್ಧತೆಗಳು ನಡೆದಿದೆ.
ಸಮಿತಿಯ ಸದಸ್ಯರು ಈಗಾಗಲೇ ಹಲವಾರು ಬಾರಿ ಸಭೆಗಳು ನಡೆಸಿದ್ದಾರೆ. ರೈತರನ್ನು ಸನ್ಮಾನಿಸುವುದು ಮತ್ತು ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ, ವಿದ್ಯುತ್ ಪೂರೈಕೆಯಲ್ಲಿ ಕೊರತೆ, ಭೀಮಾ ಏತ ನೀರಾವರಿ ಯೋಜನೆಯ ವಿಫಲತೆ ಮತ್ತು ಅದನ್ನು ಸುಧಾರಿಸಲು ಬೇಕಾಗುವ ಕಾರ್ಯಕ್ರಮಗಳು ರೂಪಿಸುವುದು ಹಾಗೂ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ರೈತರ ಹಬ್ಬದ ಉದ್ದೇಶವಾಗಿದೆ.
ಸಮಿತಿಯ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ‘ಸ್ವಾಭಿಮಾನಿ ಕಬ್ಬು ಬೆಳೆಗಾರರ ಆಯ್ಕೆ ಹೋರಾಟ ಸಮಿತಿ ಮತ್ತು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಕಾರ್ಯಕ್ರಮಕ್ಕೆ ಭಾಗವಹಿಸಲು ತಿಳಿಸಿದ್ದೇವೆ’ ಎಂದರು.
ರೈತ ಮುಖಂಡ ಚಂದ್ರಶೇಖರ ಕರಜಗಿ, ಚಿದಾನಂದ ಮಠ, ಭೀಮರಾವ್ ಗೌರ, ರಮೇಶ ಪಾಟೀಲ, ಶಾಂತು ಅಂಜುಟಗಿ ಅವರು ಮಾತನಾಡಿ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಆಯ್ಕೆ ಹೋರಾಟ ಸಮಿತಿಯ ನಿರಂತರ ಹೋರಾಟ ಮಾಡಿದ್ದರಿಂದ ಕಬ್ಬಿನ ದರ ಸ್ವಲ್ಪ ಹೆಚ್ಚಾಗಿದೆ. ಹೀಗೆ ಹೋರಾಟ ಮುಂದುವರಿಸಿದರೆ ಒಳ್ಳೆಯ ಬೆಲೆ ಸಿಗಲಿದೆ ಎಂದರು.
ರೈತರು ಭಾರತದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಎಲ್ಲಾ ಜವಾಬ್ದಾರಿಯುತ ರೈತರನ್ನು ಗೌರವಿಸಲು ಮತ್ತು ಪ್ರಶಂಸಿಸಲು ವಿಶ್ವ ರೈತ ದಿನಾಚರಣೆ ಹಾಗೂ ರೈತರ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಬಸಣ್ಣ ಗುಣಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.