ADVERTISEMENT

ಸಾಹಿತಿ ಹೇಮಂತ ಕೊಲ್ಹಾಪುರೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 3:58 IST
Last Updated 11 ಏಪ್ರಿಲ್ 2021, 3:58 IST
ಹೇಮಂತ ಕೊಲ್ಹಾಪುರೆ
ಹೇಮಂತ ಕೊಲ್ಹಾಪುರೆ   

ಕಲಬುರ್ಗಿ: ಇಲ್ಲಿನ ನೂತನ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಹಾಸ್ಯ ಕಲಾವಿದ ಹೇಮಂತ ಕೊಲ್ಹಾಪುರೆ (63) ಅವರು ಶನಿವಾರ ಹೃದಯಾಘಾತದಿಂದ ನಿಧನರಾದರು.

ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಲು ಕಲಬುರ್ಗಿ ರೈಲು ನಿಲ್ದಾಣಕ್ಕೆ ಬಂದಿದ್ದ ಅವರಿಗೆ ಹೃದಯಾಘಾತವಾಯಿತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ನಗರದ ಚಿತ್ತಾರಿ ಅಡ್ಡೆ ಹತ್ತಿರವಿರುವ ರುದ್ರಭೂಮಿಯಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೇಮಂತ ಕೊಲ್ಲಾಪುರೆ ಅವರು ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಂತರ ಪ್ರಾಚಾರ್ಯರಾಗಿ 30 ವರ್ಷ ಸೇವೆ ಸಲ್ಲಿಸಿದ್ದಾರೆ. ಹಾಸ್ಯ, ಸಾಹಿತ್ಯ, ನಾಟಕ, ಕಲೆ ಮುಂತಾ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ ಅವರು, ಆಕಾಶವಾಣಿ, ದೂರದರ್ಶನಗಳಲ್ಲಿ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲೂ ನಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.‌ ಎಂಟು ಪುಸ್ತಕಗಳೂ ಪ್ರಕಟಗೊಂಡಿವೆ.

ADVERTISEMENT

ಉತ್ತಮ ವಾಗ್ಮಿಯೂ ಆಗಿದ್ದ ಅವರು, ಹಾಸ್ಯಭಾಷಣ, ಹಾಸ್ಯಬರಹ, ಶಾಯರಿ ಪಠಣದಲ್ಲಿಯೂ ಹೆಸರು ಮಾಡಿದ್ದರು. ನಟ, ನಿರ್ದೇಶಕ, ನಾಟಕಕಾರರಾಗಿ 40 ವರ್ಷಗಳಿಂದ ರಂಗಭೂಮಿಯಲ್ಲಿಯೂ ಕೃಷಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.