ಯಡ್ರಾಮಿ: ಇಲ್ಲಿನ ನೂತನ ತಾಲ್ಲೂಕು ಪಂಚಾಯಿತಿಯ ಪ್ರಥಮ ಅಧ್ಯಕ್ಷರಾಗಿ ಕಾಂಗ್ರೆಸ್ನ ಮಾಗಣಗೇರಾ ಕ್ಷೇತ್ರದ ರತ್ನಾಬಾಯಿ ಸಿದ್ದಣ್ಣ ಕವಾಲ್ದಾರ ಮತ್ತು ಉಪಾಧ್ಯಕ್ಷರಾಗಿ ಬಳಬಟ್ಟಿ ಕ್ಷೇತ್ರದ ಅನಿತಾ ಸೀತಾರಾಮ ರಾಠೋಡ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಕುರಳಗೇರಾ ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲನಗೌಡ ಪಾಟೀಲ ಮಾತನಾಡಿ, ಯಡ್ರಾಮಿ ಪಟ್ಟಣವೂ ತಾಲ್ಲೂಕು ಕೇಂದ್ರವಾಗಿ 3 ವರ್ಷ ಕಳೆದರೂ ಇಲ್ಲಿಯವರೆಗೂ ತಹಶೀಲ್ದಾರ್ ಕಚೇರಿ ಹೊರತುಪಡಿಸಿ ಯಾವುದೇ ಇಲಾಖೆಗಳು ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಪ್ರಥಮ ಬಾರಿಗೆ ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಕಾರ್ಯಾರಂಭವಾಗಿದೆ. ಆದರೆ 24 ಇಲಾಖೆಗಳು ಆರಂಭವಾದರೆ ಮಾತ್ರ ತಾಲ್ಲೂಕಿನ ಅಭಿವೃದ್ಧಿಗೆ ಮತ್ತು ಆಡಳಿತಕ್ಕೆ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಈ ಭಾಗದ ಹಿರಿಯ ಮುಖಂಡರು, ಜನಪ್ರತಿನಿಧಿಗಳು, ಸರ್ವಸದಸ್ಯರು ಶ್ರಮಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಬಸವರಾಜ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಮಡಿವಾಳಪ್ಪಗೌಡ ಮಾಗಣಗೇರಾ, ಮಹಾಂತೇಶ ಪುರಾಣಿಕ್, ವೀರಣ್ಣ ದೋತ್ರೆ, ಹಣಮಂತ್ರಾಯಗೌಡ ಮಾಗಣಗೇರಾ, ಬಸವರಾಜಗೌಡ ಮಾಗಣಗೇರಾ, ಮಲ್ಲನಗೌಡ ಮಳ್ಳಿ, ಚಂದ್ರಕಾಂತಗೌಡ ಮಾಗಣಗೇರಾ, ಭೂ ನ್ಯಾಯ ಮಂಡಳಿ ಸದಸ್ಯ ಹಯ್ಯಾಳಪ್ಪ ಗಂಗಾಕರ್, ಅಬ್ದುಲ್ ರಜಾಕ ಮನಿಯಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.