ಮಡಿಕೇರಿ: ನಗರದ ಅಂಚೆ ಕಚೇರಿ ಬಳಿ ಹಾಪ್ಕಾಮ್ಸ್ಗೆ ನೀಡಿದ್ದ ಜಾಗವೇ ಇಂದಿರಾ ಕ್ಯಾಂಟೀನ್ಗೆ ಸೂಕ್ತವಾಗಿದ್ದು ಅದೇ ಸ್ಥಳದಲ್ಲಿ ಕ್ಯಾಂಟೀನ್ ನಿರ್ಮಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮುಕ್ಕಾಟಿರ ಬಿ.ಶಿವು ಮಾದಪ್ಪ ಹಾಗೂ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಶಿವು ಮಾದಪ್ಪ ಮಾತನಾಡಿ, ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಜಾಗ ಕಾಯ್ದಿರಿಸಿತ್ತು. ನಗರಸಭೆಯ ಗಮನಕ್ಕೆ ತಾರದೇ ಸ್ಥಳ ಗೊತ್ತುಪಡಿಸಿದೆ. ಅಲ್ಲಿ ಜನಸಂಚಾರ ವಿರಳ. ಸಾರ್ವಜನಿಕರಿಗೆ, ಕಡುಬಡವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಮತ್ತು ಬಸ್ ಸಂಚಾರವಿರುವ ನಗರದ ಮುಖ್ಯರಸ್ತೆಯಲ್ಲಿ ಕ್ಯಾಂಟೀನ್ ಆರಂಭಿಸುವುದು ಸೂಕ್ತ ಎಂದು ಹೇಳಿದರು.
ನಗರದ ಅಂಚೆ ಕಚೇರಿ ಎದುರು ಹಾಪ್ಕಾಮ್ಸ್ಗೆ ನೀಡಿರುವುದು ಸರ್ಕಾರಿ ಜಾಗ. ಕ್ಯಾಂಟೀನ್ ನಿರ್ಮಾಣಕ್ಕೆ ಇದೇ ಸೂಕ್ತವಾಗಿದೆ. ಈ ಜಾಗವು ಅಗತ್ಯವಿದ್ದಲ್ಲಿ ಮಂಜೂರಾತಿ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆಯಬಹುದು. ಕ್ಯಾಂಟೀನ್ ನಿರ್ಮಾಣಕ್ಕೆ ಸುಮಾರು ಮೂರು ಗುಂಟೆಯಷ್ಟು ನಿವೇಶನದ ಅಗತ್ಯವಿದೆ. ಇದೇ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕೆನ್ನುವ ಚಿಂತನೆಯಿತ್ತು. ಇದೇ ಕಾರಣಕ್ಕಾಗಿ ಹಾಪ್ಕಾಮ್ಸ್ನವರು ತರಾತುರಿಯಲ್ಲಿ ಮಣ್ಣು ತೆಗೆದು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ತನಕ ಹಾಪ್ಕಾಮ್ಸ್ ಸಂಸ್ಥೆಯ ಕಾಮಗಾರಿಯನ್ನು ತಡೆಹಿಡಿ
ಯಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ನಗರಸಭಾ ಸದಸ್ಯರಾದ ಜುಲೇಕಾಬಿ, ತಜಸುಂ, ಎಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ಯತೀಶ್, ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ, ಪ್ರಮುಖರಾದ ಉಸ್ಮಾನ್, ಪ್ರಭುರೈ, ಹನೀಫ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.