ಮಡಿಕೇರಿ: ‘ಧರ್ಮ, ಜಾತಿ, ಭಾಷೆಗಳ ನಡುವೆ ಪ್ರೀತಿ, ಸಹೋದರತೆ ಮೂಡಿ, ಎಲ್ಲರೂ ಒಂದೇ ಎನ್ನುವ ಭಾವನೆ ಮೂಡವುದದೇ ಐಕ್ಯತೆ’ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾದ (ಎಸ್ಐಒ) ರಾಷ್ಟ್ರೀಯ ಅಧ್ಯಕ್ಷ ನಹಾಸ್ ಎ.ಎಚ್. ಅಭಿಪ್ರಾಯಪಟ್ಟರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಎಸ್ಐಒ ವತಿಯಿಂದ ನಡೆದ ‘ಹಲವು ಧರ್ಮ, ಒಂದು ಭಾರತ’ ಸೌಹಾರ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕೇವಲ ಭೌಗೋಳಿಕವಾಗಿ ಎಲ್ಲರೂ ಒಂದಾಗುವುದು ಏಕತೆಯಲ್ಲ. ಸೌಹಾರ್ದವನ್ನು ಯಾರಿಗೂ ಕಲಿಸುವ ವಿಚಾರವಲ್ಲ. ನಮ್ಮೊಳಗೇ ಅದು ಬದಲಾವಣೆ ಆಗಬೇಕು’ ಎಂದು ವಿಶ್ಲೇಷಿಸಿದರು.
‘ಧರ್ಮ, ಜಾತಿ ಹಾಗೂ ಭಾಷೆಗಳ ನಡುವೆ ಪ್ರೀತಿಯನ್ನು ಪಸರಿಸಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು’ ಎಂದು ಹೇಳಿದರು. ಮಡಿಕೇರಿಯ ಸಿಎಸ್ಐ ಶಾಂತಿ ಚರ್ಚ್ನ ಫಾದರ್ ಅಮೃತ್ ರಾಜ್ ಮಾತನಾಡಿ, ‘ಹಲವು ಧರ್ಮಗಳನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ಸ್ವಾರ್ಥ, ಅಹಂ, ಕೀಳರಿಮೆ ಹಾಗೂ ಅಸೂಯೆಯಿಂದ ಒಡಕು ಮೂಡುತ್ತಿದೆ. ಇದೊಂದು ಆತಂಕದ ವಿಚಾರ’ ಎಂದು ಎಚ್ಚರಿಸಿದರು.
ಎಸ್ಐಒನ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಬೀದರ್ ಮಾತನಾಡಿ, ‘ಎಲ್ಲಾ ಧರ್ಮ, ಜಾತಿ ಹಾಗೂ ಭಾಷೆಯನ್ನು ಎಲ್ಲರೂ ಗೌರವಿಸಬೇಕು ಮತ್ತು ಪ್ರೀತಿಸಬೇಕು’ ಎಂದು ಮನವಿ ಮಾಡಿದರು.
ಸಾಮಾಜಿಕ ಹೋರಾಟಗಾರ ವಿ.ಪಿ. ಶಶೀಧರ್, ‘ತಿನ್ನುವ ಊಟ, ತೊಡುವ ಉಡುಪು, ಆಚರಣೆಗಳಲ್ಲಿ ಧರ್ಮ ಧರ್ಮಗಳ ನಡುವೆ ವಿವಾದ ಸೃಷ್ಟಿಯಾಗಬಾರದು. ಇದು ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತದೆ. ಇಂದು ಇದೇ ಹೆಚ್ಚಾಗಿ ನಡೆಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಎಂ. ಶೌಕತ್ ಆಲಿ, ಅಜರುದ್ದೀನ್ ಪಿ.ಎ., ರಾಜ್ಯ ಸಲಹಾ ಸಮಿತಿ ಸದಸ್ಯ ಯಾಸೀನ್ ಕೋಡಿಬೆಂಗ್ರೆ, ಡಾ.ಸತೀಶ್ ವಿ. ಶಿವಮಲ್ಲಯ್ಯ, ಪಿ.ಕೆ ಅಬ್ದುಲ್ ರೆಹಮಾನ್, ಕೆ.ಬಿ. ರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.