ADVERTISEMENT

ಆನೆಕ್ಯಾಂಪ್ ಕೆರೆಗೆ ಗಜ ಗಾತ್ರದ ಗ್ರಹಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 4:00 IST
Last Updated 12 ಆಗಸ್ಟ್ 2012, 4:00 IST

ಗೋಣಿಕೊಪ್ಪಲು: ಕಾಡು ಪ್ರಾಣಿಗಳ ಕುಡಿಯುವ ನೀರಿಗೆ ಆಸರೆಯಾಗಿರುವ ಮಜ್ಜಿಗೆಹಳ್ಳ ಆನೆ ಕ್ಯಾಂಪ್ ಕೆರೆಯಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬುತ್ತಿದೆ.

ತಿತಿಮತಿ ಬಳಿಯ ಮಜ್ಜಿಗೆಹಳ್ಳದಲ್ಲಿರುವ ಈ ಕೆರೆಯಲ್ಲಿ ರಾತ್ರಿಯ ವೇಳೆಯಲ್ಲಿ ಕಾಡು ಪ್ರಾಣಿಗಳ ದಂಡೇ ಇರುತ್ತದೆ. ಕಾಡು ಹಂದಿ, ಆನೆ ಮುಂತಾದ ಪ್ರಾಣಿಗಳ  ಸ್ವಚ್ಛಂದ ವಿಹಾರಕ್ಕೆ ಇದು ಸ್ವರ್ಗವಾಗಿದೆ. ತಿತಿಮತಿ ಹುಣಸೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಈ ಕೆರೆಯ ಒಂದು ಭಾಗ ರಸ್ತೆಗೆ ಹೊಂದಿ ಕೊಂಡಿದೆ. ಮತ್ತೊಂದು ಭಾಗಕ್ಕೆ ಅರಣ್ಯದ ಪ್ರದೇಶವಿದೆ. ಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಬರುತ್ತದೆ. ನೀರು ಕೂಡ ಶುದ್ಧವಾಗಿದೆ. ಆದರೆ ಕೆರೆ ಮತ್ತು ಏರಿಯನ್ನು ಸ್ವಚ್ಚಗೊಳಿಸದೇ ಇರುವುದರಿಂದ ಕೆರೆಯ ದಡದಲ್ಲಿ ಪೊದೆಗಳು ಬೆಳೆದುಕೊಂಡಿವೆ.
`ಕೆರೆ ಕೋಡಿ ದುಃಸ್ಥಿತಿಯಲ್ಲಿದ್ದು ಕಲ್ಲು ಕಿತ್ತು ಹೋಗಿವೆ. ಇದರಿಂದ ಕೆರೆಯ ನೀರು ಸಾಕಷ್ಟು ಪೋಲಾಗುತ್ತಿದೆ.

ಉತ್ತಮ ನೀರಿನ ಮೂಲವನ್ನು ಹೊಂದಿರುವ ಕೆರೆ ಬರಗಾಲದಲ್ಲೂ ಬತ್ತಿಲ್ಲ. ಸಾವಿರಾರು ಕಾಡು ಪ್ರಾಣಿಗಳಿಗೆ ನೀರುಣಿಸುತ್ತದೆ~ ಎನ್ನುತ್ತಾರೆ ಮಜ್ಜಿಗೆ ಹಳ್ಳ ಆನೆ ಕ್ಯಾಂಪ್ ಜೇನುಕುರುಬರ ಹಾಡಿಯ ನಿವಾಸಿ ಕಿರಣ್.

 ಈ ಕೆರೆಯ ದಡದಲ್ಲಿ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರವಿದೆ. ಕೆರೆಯ ನೀರನ್ನು ಬಳಸಿಕೊಂಡು ಅರಣ್ಯ ಕೃಷಿ ಯೋಜನೆಗೆ ಪ್ರೋತ್ಸಾಹಿಸುವ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ. ಜತೆಗೆ ಮಜ್ಜಿಗೆ ಹಳ್ಳ ಹಾಡಿಯ ಜನತೆಯ ಬಟ್ಟೆ ತೊಳೆಯುವ ಹಾಗೂ ನಿತ್ಯ ಕರ್ಮಗಳ ಕೆಲಸಕ್ಕೆ ಬಳಕೆಯಾಗುತ್ತಿದೆ.

ಈ ಕೆರೆಯ ಹೂಳೆತ್ತಿಸಿ ಸುತ್ತ ಬೆಳೆದಿರುವ ಗಿಡಗಂಟಿ ಮತ್ತಯ ಪೊದೆಗಳನ್ನು ಕಡಿದು ಸ್ವಚ್ಛಗೊಳಸಿದರೆ ಕೆರೆ ಒಂದು ಸುಂದರ ತಾಣವಾಗಲಿದೆ. ಮುಖ್ಯ ರಸ್ತೆಯ ಅಂಚಿನಲ್ಲಿ ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ಕೇಂದ್ರವನ್ನಾಗಿಯೂ ಮಾರ್ಪಡಿಸಬಹುದು ಎಂಬುದು ಜನತೆಯ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.