ನಾಪೋಕ್ಲು: ಹಾಕತ್ತೂರು ಚರಕ ಚಿಕಿತ್ಸಾಲಯ, ಮಡಿಕೇರಿ ಅಶ್ವಿನಿ ಆಸ್ಪತ್ರೆ, ರೋಟರಿ ಮಿಸ್ಟಿಹಿಲ್ಸ್ ಮತ್ತು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಆಶ್ರಯದಲ್ಲಿ ಹಾಕತ್ತೂರು ಚರಕ ಚಿಕಿತ್ಸಾಲಯದ 16ನೇ ವಾರ್ಷಿಕೋತ್ಸವ ಅಂಗವಾಗಿ ಆರೋಗ್ಯ ಚಿಕಿತ್ಸಾ ಉಚಿತ ಶಿಬಿರವು ಯಶಸ್ವಿಯಾಗಿ ನಡೆಯಿತು.
ಹಾಕತ್ತೂರು ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲೆ ಹಾಗೂ ಚರಕ ಚಿಕಿತ್ಸಾಲಯದ ಆವರಣದಲ್ಲಿ ನಡೆದ ಶಿಬಿರವನ್ನು ಮಡಿಕೇರಿ ಅಶ್ವಿನಿ ಆಸ್ಪತ್ರೆ ಹಿರಿಯ ನಿರ್ದೇಶಕ ಎಂ.ಸಿ. ಗೋಖಲೆ ಉದ್ಘಾಟಿಸಿದರು.
ಅಶ್ವಿನಿ ಆಸ್ಪತ್ರೆ ವೈದ್ಯರಾದ ಡಾ.ಪಿ.ಎನ್. ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ದೊರೆತರೆ ಉತ್ತಮ ಸಾಧನೆ ಮಾಡಬಹುದು. ಚರಕ ಚಿಕಿತ್ಸಾಲಯಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು, ಸಹಾಯ ಹಸ್ತ ನೀಡುವ ದಾನಿಗಳು ಮುಂದೆ ಬರಬೇಕಾಗಿದೆ ಎಂದರು.
ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಸತೀಶ್ ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಮಧುಸೂಧನ್, ಸದಸ್ಯ ದೇವಂಡಿರ ತಿಲಕ್ ಪೊನ್ನಪ್ಪ, ಹಾಕತ್ತೂರು ಗ್ರಾಮ ಪಂಚಾಯಿತಿ ಪಿಡಿಒ ಸಬಾಸ್ಟಿನ್, ಶಾಲಾ ಮುಖ್ಯಶಿಕ್ಷಕ ಟಿ.ಪಿ. ಸ್ವಾಮಿ, ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಾಜಿ ಅಧ್ಯಕ್ಷ ಪಿ.ಈ. ದಿವಾಕರ್, ಕಾರ್ಯದರ್ಶಿ ಪಿ.ಆರ್. ರಂಜಿತ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ.ಕುಲಕರ್ಣಿ ಡಾ.ಮೋಹನ್ ಅಪ್ಪಾಜಿ, ಡಾ.ದೇವಯ್ಯ, ಡಾ.ಅರುಣ್ ಕುಲಕರ್ಣಿ, ಡಾ.ದಿವ್ಯಶ್ರೀ, ಡಾ.ಸುಧಾಕರ್ ತಪಾಸಣೆ ನಡೆಸಿದರು. ಶಾಲಾ ಮಕ್ಕಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ. ಸುಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಪಿ.ಈ. ದಿವಾಕರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.