ನಾಪೋಕ್ಲು: ಜೀವನದಲ್ಲಿ ಬರುವ ಕಷ್ಟಗಳು ಸಾತ್ವಿಕ ಮನುಷ್ಯನನ್ನು ರೂಪಿಸುತ್ತವೆ. ಆದರೆ ಸುಖಗಳು ಮನುಷ್ಯನಲ್ಲಿ ರಾಕ್ಷಸ ಪ್ರವೃತ್ತಿಯನ್ನು ಮೈಗೂಡಿಸುತ್ತವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ಸಮೀಪದ ಕಿಗ್ಗಾಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜೀವನ ವಿದ್ಯಾರ್ಥಿಗಳಿಗೆ ಸಂತೃಪ್ತಿ, ಸಹಬಾಳ್ವೆ, ಶ್ರದ್ಧೆ ಹಾಗೂ ವಿಶ್ವಾಸವನ್ನು ಮೈಗೂಡಿಸಿಕೊಂಡು ಬದುಕಲು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕು.
ಮನುಷ್ಯ ದುರ್ಬಲನಾಗಿದ್ದರೆ ಇತರರಿಗೆ ತೊಂದರೆ ನೀಡುವ ಪ್ರವೃತ್ತಿಯಲ್ಲಿ ತೊಡಗುತ್ತಾನೆ. ಯಾರು ಉನ್ನತ ಚಿಂತನೆಯನ್ನು ಮಾಡುತ್ತಾರೋ ಅವರಲ್ಲಿ ವಿಶಾಲ ಬದುಕಿನ ಭದ್ರತೆಯನ್ನು ಕಾಣಬಹುದು ಎಂದರು.
ಮಡಿಕೇರಿ ಆರ್.ಎಂ.ಸಿ.ಅಧ್ಯಕ್ಷ ಬೆಲ್ಲು ಸೋಮಯ್ಯ ಮಾತನಾಡಿ, ನಾಯಕರಾಗಬೇಕೆಂಬ ಮನಸ್ಸುಳ್ಳವರು ಮತ್ತೊಬ್ಬರನ್ನು ಅವಲಂಬಿಸಬಾರದು. ಸ್ವಾರ್ಥ ಮನೋಭಾವನೆ ಹೆಚ್ಚುತ್ತಿರುವ ಸಮಾಜದಲ್ಲಿ ಇತರರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಜಿ. ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ, ಸಿ.ಎಂ.ಪೆಮ್ಮಯ್ಯ ಮಾತನಾಡಿದರು.
ವೇದಿಕೆಯಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿ ಪಿ.ಎಂ. ದೇವಕ್ಕಿ, ಪಿ.ಸಿ.ಸುಬ್ರಮಣಿ, ಕಾಫಿ ಬೆಳೆಗಾರ ಪಿ.ಎಂ.ವಿಶ್ವನಾಥ್, ಉಪನ್ಯಾಸಕ ಪಿ.ಮಹದೇವಸ್ವಾಮಿ ಉಪಸ್ಥಿತರಿದ್ದರು. ಸಹ ಶಿಬಿರಾಧಿಕಾರಿ ಟಿ.ಬಿ.ಗೀತಾ ಸ್ವಾಗತಿಸಿದರು. ಪಿ.ಮಹದೇವಸ್ವಾಮಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.