ಮಡಿಕೇರಿ: `ಕೊಡಗು ಜಿಲ್ಲೆಯ ಇತಿಹಾಸ ಸಾರುವ ವಿಗ್ರಹಗಳಿಗೆ ಭದ್ರತೆ ನೀಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಮಡಿಕೇರಿಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ ತಿಳಿಸಿದರು.
ಸೆಪ್ಟೆಂಬರ್ 1ರಂದು `ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡ `ಇತಿಹಾಸ ಸಾರುವ ವಿಗ್ರಹಗಳಿಗೆ ಅಭದ್ರತೆ' ಲೇಖನಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
`ಕೊಡಗು ಜಿಲ್ಲೆಯ ಸಾಕಷ್ಟು ಪ್ರದೇಶಗಳಲ್ಲಿ ಇಂತಹ ಇತಿಹಾಸ ಸಾರುವ ಹಲವು ವಿಗ್ರಹಗಳು, ದೇವಾಲಯಗಳಿವೆ. ನಂಜರಾಯಪಟ್ಟಣದ ದೇವಿರಮ್ಮ ಪ್ರತಿಮೆ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಅಲ್ಲಿರುವ ಕೆಲವು ಸ್ಥಳೀಯರ ಜೊತೆ ಇದರ ಬಗ್ಗೆ ಮಾತನಾಡಿದ್ದೇನೆ. ಸದ್ಯದಲ್ಲಿಯೇ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಏರ್ಪಡಿಸಿ, ಅಲ್ಲಿ ಏನು ಮಾರ್ಗ ಕಂಡುಬರುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆಂದು ಕೆಲವರು ಹೇಳಿದ್ದಾರೆ. ಹೀಗಾಗಿ ನಾವು ಅಲ್ಲಿಯವರೆಗೆ ಕಾಯಲು ನಿರ್ಧರಿಸಿದ್ದೇವೆ' ಎಂದು ಅವರು ಹೇಳಿದರು.
`ಅಲ್ಲಿನ ಸ್ಥಳೀಯರನ್ನು ಭೇಟಿ ಮಾಡಿ, ಜಿಲ್ಲೆಯ ಇತಿಹಾಸ ಸಾರುವ ವಿಗ್ರಹವು ಜಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿದ್ದರೆ ಉತ್ತಮವೆಂದು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಈ ವಿಷಯದ ಬಗ್ಗೆ ನನ್ನ ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.