ಸೋಮವಾರಪೇಟೆ: ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ವರ್ಗಾವಣೆ ಮಾಡಿದ ಆರೋಪದಡಿ ಸರ್ಕಾರ ತಾಲ್ಲೂಕಿನ 9 ಮಂದಿ ಗ್ರಾಮ ಲೆಕ್ಕಿಗರು ಮತ್ತು 2 ಮಂದಿ ಕಂದಾಯ ನಿರೀಕ್ಷಕರ ಅಮಾನತು ಖಂಡಿಸಿ ಸೋಮವಾರ ತಾಲ್ಲೂಕು ಕಚೇರಿ ಸಿಬ್ಬಂದಿ ಮುಷ್ಕರ ನಡೆಸಿದರು.
ಇದರಿಂದ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತಾಯಿತು.
ಸೆ. 22 ರಂದು ಕಂದಾಯ ಇಲಾಖೆಯ ಕೆಲ ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ ಹಿನ್ನೆಲೆಯಲ್ಲಿ ಸೆ.23ರಂದು ಸೋಮವಾರಪೇಟೆ ತಾಲ್ಲೂಕು ಕಚೇರಿಯ ಕರ್ಮಚಾರಿಗಳು ಲೇಖನಿ ಸ್ಥಗಿತಗೊಳಿಸಿ ಸಾಂಕೇತಿಕ ಧರಣಿ ನಡೆಸಿದ್ದರು.
ಸರ್ಕಾರದ ಈ ಕ್ರಮದಿಂದಾಗಿ ತಾಲ್ಲೂಕು ಕಚೇರಿಯ ಅನ್ಯ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಹೆಚ್ಚುವುದರೊಂದಿಗೆ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗುವುದರಿಂದ ಕೂಡಲೆ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.
ಸೋಮವಾರದಂದು ಜಿಲ್ಲೆಯ ಮೂರೂ ತಾಲ್ಲೂಕುಗಳ ಕಂದಾಯ ಇಲಾಖೆಯ ಸಿಬ್ಬಂದಿ ಜಿಲ್ಲಾ ಸಂಘದ ನೇತೃತ್ವದಡಿ ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದರಿಂದ ಸೋಮವಾರಪೇಟೆಯ ತಾಲ್ಲೂಕು ಕಚೇರಿಯ ಸಿಬ್ಬಂದಿ ಮಡಿಕೇರಿಗೆ ತೆರಳಿದ್ದರು. ಸಂತೆ ದಿನವಾದ ಸೋಮವಾರ ದೂರದ ಗ್ರಾಮೀಣ ಭಾಗದಿಂದ ಕಚೇರಿ ಕೆಲಸಕ್ಕಾಗಿ ಬಂದಿದ್ದ ಸಾರ್ವಜನಿಕರು ಖಾಲಿಯಾದ ಕುರ್ಚಿ ಮೇಜುಗಳನ್ನು ನೋಡಿ ಹಿಂತಿರುಗಿದರು.
ಸಂತೆಯ ದಿನ ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ತಾಲ್ಲೂಕು ಕಚೇರಿ ನೌಕರರ ಮುಷ್ಕರದಿಂದಾಗಿ ಭಣಗುಡುತ್ತಿತ್ತು. ತುರ್ತು ಕೆಲಸಕ್ಕಾಗಿ ಕಚೇರಿಗೆ ಬಂದ ಜನರು ಮುಷ್ಕರದ ಮಾಹಿತಿಯಿಲ್ಲದೆ ಖಾಲಿಯಾದ ಕಚೇರಿಯನ್ನು ನೋಡಿ ಪರದಾಡಿದರು.
ತಹಶೀಲ್ದಾರ್ ಎ.ದೇವರಾಜು ಅವರು ತಮ್ಮ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸುತ್ತಿರುವುದು ಕಂಡುಬಂದಿತು. ಇವರೊಂದಿಗೆ ಪ್ರೊಬೇಷನರಿ ಅವಧಿಯಲ್ಲಿರುವ ನೌಕರರು ಎಂದಿನಂತೆ ಕಾರ್ಯ ನಿರ್ವಹಿಸಿದರು. ಆದರೆ ಹೆಚ್ಚಿನ ಸಿಬ್ಬಂದಿ ಗೈರು ಹಾಜರಾದ್ದರಿಂದ ಯಾವುದೇ ಕಡತ ವಿಲೇವಾರಿಯಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.