ADVERTISEMENT

ಕುಶಾಲನಗರ: ಕೃಷಿ ಪತ್ತಿನ ಸಹಕಾರ ಸಂಘ: ರೂ 28.51 ಲಕ್ಷ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 8:23 IST
Last Updated 7 ಸೆಪ್ಟೆಂಬರ್ 2013, 8:23 IST

ಕುಶಾಲನಗರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2012-13ನೇ ಸಾಲಿನಲ್ಲಿ ಒಟ್ಟು 178.91 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ನಡೆಸಿದ್ದು, ರೂ 28.51 ಲಕ್ಷ ನಿವ್ವಳ ಲಾಭ ಪಡೆದಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ರಾಜೇಶ್ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಸಂಘದ ಲಾಭಾಂಶ ಘೋಷಣೆ ಮಾಡಿದರು. ಸಂಘವು ಇದುವರೆಗೆ ಒಟ್ಟು 2959 ಸದಸ್ಯರನ್ನು ಹೊಂದಿದ್ದು, ರೂ 43.38 ಲಕ್ಷ ಶೇರು ಬಂಡವಾಳ ಹೊಂದಿದೆ. ಅಲ್ಲದೆ 2012-13ನೇ ಸಾಲಿನಲ್ಲಿ ವಿವಿಧ ರೀತಿಯ ಒಟ್ಟು ರೂ 20.71 ಕೋಟಿ ಠೇವಣಿ ಸಂಗ್ರಹಿಸಿದ್ದು ಆದ್ಯತೆ ಮೇರೆಗೆ 123 ಸ್ವಸಹಾಯ ಗುಂಪುಗಳ ಪೈಕಿ 68 ಗುಂಪುಗಳಿಗೆ ಸ್ವಂತ ಬಂಡವಾಳದಿಂದ ರೂ 112.13 ಲಕ್ಷ ಸಾಲ ನೀಡಲಾಗಿದೆ ಎಂದರು.

ಸಂಘವು 25 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಅಲ್ಲದೆ ಸದಸ್ಯರಿಗೆ ಎರಡು ವರ್ಷಗಳಿಂದಲೂ ಶೇ 25 ರಷ್ಟು ಡಿವಿಡೆಂಟ್ ನೀಡುತ್ತಿದ್ದು, 2013ನೇ ಸಾಲಿನಲ್ಲೂ ಶೇ 25ರಷ್ಟು ಡಿವಿಡೆಂಟ್ ಘೋಷಿಸಲಾಗಿದೆ ಎಂದು ತಿಳಿಸಿದರು.

ಸಂಘದ ಮಹಾಸಭೆಯು ಇದೇ 14 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಕುಶಾಲನಗರದ ಗೌಡ ಸಮಾಜದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಉಪಾಧ್ಯಕ್ಷ ಗಣೇಶ್, ನಿರ್ದೇಶಕರುಗಳಾದ ಕಾರ್ತೀಶನ್, ರಾಮಚಂದ್ರ, ಯತೀಶ್, ಸತೀಶ್, ಆನಂದ, ನೇತ್ರಾವತಿ ವ್ಯವಸ್ಥಾಪಕಿ ದೇಚಮ್ಮ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.