ADVERTISEMENT

ಕೊಡಗಿನ ಇತಿಹಾಸ; ಸಂಶೋಧಕರಿಗೆ ವಿಪುಲ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 7:50 IST
Last Updated 26 ಮಾರ್ಚ್ 2012, 7:50 IST

ಮಡಿಕೇರಿ: ಕೊಡಗಿನ ಇತಿಹಾಸ ಹಾಗೂ ಸಂಸ್ಕೃತಿಯು ಶಾಸನ, ಜಾನಪದ, ಸಾಹಿತ್ಯ, ಶಿಲ್ಪ, ರಾಜಕೀಯ, ಜನಾಂಗೀಯ ವೈವಿಧ್ಯತೆಯ ಮೂಲಕ ವ್ಯಕ್ತವಾಗಿದ್ದು, ಸಂಶೋಧಕರಿಗೆ ವಿಪುಲ ಅವಕಾಶಗಳಿವೆ ಎಂದು ಇತಿಹಾಸ ಸಂಶೋಧಕ ಬೆಂಗಳೂರಿನ ಡಾ.ಎಂ.ಜಿ.ನಾಗರಾಜ್ ಹೇಳಿದರು.

ನಗರದ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳೂರು ವಿವಿಯ ಇತಿಹಾಸ ವಿಭಾಗ ಮತ್ತು ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಆಶ್ರಯದಲ್ಲಿ ಶನಿವಾರ ನಡೆದ `ಕೊಡಗು: ಐತಿಹಾಸಿಕ ಅನುಭವ ಹಾಗೂ ಸಮಕಾಲೀನ ಪರಿಸ್ಥಿತಿ~ ಕುರಿತಾದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗಿನ ಜಾನಪದ ಹಾಗೂ ಇತಿಹಾಸ ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಈ ಅಂಶಗಳಿಗೆ ಹೊಸದಾಗಿ ಹಾಗೂ ಸೂಕ್ತವಾ ದುದನ್ನು ಸೇರಿಸುವುದು ಸಂಶೋಧಕರ ಎದುರು ಇರುವ ಬಹುದೊಡ್ಡ ಸವಾಲು ಎಂದರು.

ಇತಿಹಾಸವು ವರ್ತಮಾನಕ್ಕೆ ಪ್ರೇರಣೆಯಾಗಿ ರಬೇಕು.  ಇತಿಹಾಸವನ್ನು ಕೂಡ ವೈಜ್ಞಾನಿಕ ನೆಲೆಯಲ್ಲಿ ನೋಡಬೇಕು. ಸೃಜನಶೀಲ ಕೃತಿ ರಚನೆ ಮಾಡಲು ಸಾಹಿತಿಗೆ ಅನುಭವ ಬೇಕಾಗಿರುವಂತೆ ಸಂಶೋಧಕರಿಗೂ ಸೃಜನಶೀಲತೆಯ ನೋಟ ಇದ್ದಲ್ಲಿ ಮಾತ್ರ ಹೊಸತನವನ್ನು ನೀಡಲು ಸಾಧ್ಯ ಎಂದು ಅವರು ವ್ಯಾಖ್ಯಾನಿಸಿದರು.

ಮಾತೆ ಕಾವೇರಿ ನದಿಯ ಬಗ್ಗೆ ಪ್ರಸ್ತಾಪಿಸಿದ ಅವರು, ಹಿಮಾಲಯ ಹಾಗೂ ಗಂಗಾನದಿಗಳಿಗೆ ಮುನ್ನ, 10 ಲಕ್ಷ ವರ್ಷಗಳ ಹಿಂದೆ ದಕ್ಷಿಣ ಭಾರತದ ಎರಡೂ ಬದಿಗಳನ್ನು ದಾಟಿ ಪಶ್ಚಿಮ ದತ್ತ ಎರಡು ಕವಲು, ಪೂರ್ವದತ್ತ ಒಂದು ಕವಲಾಗಿ ಕಾವೇರಿ ಹರಿಯುತ್ತಿತ್ತು ಎಂದರು.

ಮುಖ್ಯ ಅತಿಥಿಯಾಗಿದ್ದ ಲೇಖಕಿ ಬೆಂಗಳೂರಿನ ಡಾ.ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ ಮಾತನಾಡಿ,  ತಾವು ತಮ್ಮ ಪತಿಯೊಂದಿಗೆ ಕಳೆದ ಐದು ವರ್ಷಗಳಿಂದ ಐನ್‌ಮನೆ ಕುರಿತು ಸಂಶೋಧನೆ ನಡೆಸುತ್ತಿದ್ದು, ಇಲ್ಲಿ 700 ಕ್ಕೂ ಹೆಚ್ಚು ಐನ್‌ಮನೆಗಳಿವೆ ಎಂದರು.

ಮನೆ ಹೆಸರು, ಜನಾಂಗ, ಪ್ರಕೃತಿ ಪೂಜೆ ಮತ್ತು ಹಿರಿಯರ ಬಗೆಗಿನ ಪ್ರೀತಿಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಐನ್‌ಮನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ಶೇ.60 ರಷ್ಟು ಐನ್‌ಮನೆಗಳು ಮೂಲ ಸೌಕರ್ಯಗಳನ್ನು ಕಳೆದುಕೊಂಡಿದ್ದು, ಆಧುನೀಕರಣಗೊಂಡಿವೆ. ಸಂಸ್ಕೃತಿ ಮತ್ತು ಪ್ರಕೃತಿ ಕುರಿತಾದ ಪ್ರೀತಿ ಉಳಿಯಲು ಐನ್‌ಮನೆಗಳು ಬೇಕು, ಅವು ನಮ್ಮ ಅಸ್ತಿತ್ವದ ಪ್ರತೀಕ ಮಾತ್ರವಲ್ಲ ಪ್ರತಿಬಿಂಬ ಕೂಡ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಇತಿಹಾಸವು ದಾಖಲೆಗಳ ಮೂಲಕ ವಿಮರ್ಶೆ ಯಾಗಬೇಕೇ ಹೊರತು ವಿವಾದವಾಗಬಾರದು ಎಂದರು.

ಪ್ರಸ್ತುತ ಸಂಶೋಧಕ ಡಾ.ಎಂ.ಜಿ.ನಾಗರಾಜ್ ಅವರ ಕೃತಿಗಳನ್ನು ಕೊಡವ ಅಧ್ಯಯನ ಪೀಠದ ಮೂಲಕ ಹೊರತರುವ ಪ್ರಯತ್ನ ನಡೆಯಬೇಕು. ಇದರಿಂದಾಗಿ ಕೊಡಗಿನ ಇತಿಹಾಸದ ಪರಂಪರೆ ಯನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾ ಯಿತು. ಎಫ್‌ಎಂಕೆಎಂಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಡಿ.ತಿಮ್ಮಯ್ಯ ಉಪಸ್ಥಿತರಿದ್ದರು.

ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಹನುಮ ನಾಯಕ ಸ್ವಾಗತಿಸಿದರು. ಎಫ್‌ಎಂಕೆಎಂಸಿ. ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗಣಪತಿ ಗೌಡ ನಿರೂಪಿಸಿದರು. ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕ ಡಾ.ಕೆ.ಎಂ.ಲೋಕೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.